ಮೈಸೂರು: ಪೈಪ್ಲೈನ್ ಮೂಲಕ ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲ (ಪಿಎನ್ಜಿ) ಪೂರೈಸುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅನುಷ್ಠಾನಕ್ಕಾಗಿ ಪೈಪ್ಲೈನ್ ಅಳವಡಿಸಲು ಬಳಸಿಕೊಳ್ಳುವ ಜಾಗಕ್ಕೆ ಪಾಲಿಕೆಗೆ ನೀಡಬೇಕಾದ ಹಣದ ಪರಿಷ್ಕೃತ ದರ ಸಂಬಂಧ ಸರ್ಕಾರ ಇತ್ತೀಚೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಕಾಮಗಾರಿ ಕೈಗೊಳ್ಳಲು ಕಂಪನಿಗೆ ಅನುಮತಿ ಪತ್ರ ನೀಡುವಂತೆ ಸಂಸದ ಪ್ರತಾಪ್ಸಿಂಹ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಪಾಲಿಕೆ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಕೆ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಜನತೆಗೆ ಇದು ಅತ್ಯಂತ ಅವಶ್ಯಕ ಯೋಜನೆಯಾಗಿದೆ. ಗ್ರಾಹಕರಿಗೆ ನಿರಂತರವಾಗಿ ಅನಿಲ ಪೂರೈಕೆ ಆಗಲಿದೆ. ಸಿಲಿಂಡರ್ ಬುಕ್ ಮಾಡುವ ಅವಶ್ಯಕತೆ ಇರುವುದಿಲ್ಲ. ಎಲ್ಪಿಜಿ ಅಡುಗೆ ಅನಿಲಕ್ಕಿಂತ ಎಲ್ಎನ್ಜಿ ಅಡುಗೆ ಅನಿಲ ಕಡಿಮೆ ದರಕ್ಕೆ ದೊರೆಯಲಿದೆ. ಎಲ್ಎನ್ಜಿ ಅಡುಗೆ ಅನಿಲ ಪರಸರ ಸ್ನೇಹಿಯೂ ಅಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಆತಂಕಪಡುವ ಅವಶ್ಯಕತೆ ಇಲ್ಲ. ಇಂತಹ ಯೋಜನೆಗೆ ಸ್ಥಳೀಯ ಸಂಸ್ಥೆಗಳಿಂದ ಅಗತ್ಯ ಸಹಕಾರ ದೊರೆಯಬೇಕು ಎಂದು ಸೂಚಿಸಿದರು.
ರಸ್ತೆಯ ಪಕ್ಕದಲ್ಲಿ ಭೂಮಿ ಅಗೆದು ಪೈಪ್ಲೈನ್ ಅಳವಡಿಸಲು ಬಳಕೆ ಮಾಡಿಕೊಳ್ಳುವ ಜಾಗಕ್ಕೆ ಪಾಲಿಕೆಗೆ ಒಂದು ಮೀಟರ್ಗೆ 1,957 ರೂ. ಪಾವತಿಸಬೇಕೆಂದು ನಿಗದಿಗೊಳಿಸಲಾಗಿತ್ತು. ಆದರೆ, ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತದೆ. ಇದರಿಂದ ಗ್ಯಾಸ್ನ ವೆಚ್ಚ ದುಬಾರಿಯಾಗುತ್ತದೆ ಎಂಬ ಕಾರಣಕ್ಕೆ ಈ ವೆಚ್ಚ ಕಡಿತಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದನ್ನು ಪರಿಶೀಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನವೆಂಬರ್ನಲ್ಲಿ ಈ ವೆಚ್ಚವನ್ನು ಕೇವಲ 1 ರೂ.ಗೆ ಇಳಿಕೆ ಮಾಡಿzರೆ. ಮಾತ್ರವಲ್ಲದೆ ಕಂಪನಿಯವರು ಪಾಲಿಕೆ ಹೇಳುವ ರೀತಿಯಲ್ಲಿ ಯೋಜನೆಗಾಗಿ ರಸ್ತೆಯ ಪಕ್ಕ ತೆಗೆದ ಗುಂಡಿಯನ್ನು ಮತ್ತೆ ಸರಿಪಡಿಸಿಕೊಡಬೇಕು ಎಂದು ಗೆಜೆಟ್ನಲ್ಲಿ ಹೇಳಲಾಗಿದೆ. ಅದನ್ನು ಜಾರಿಗೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕಂಪನಿಯವರು ಸದ್ಯ ಪರಿಷ್ಕೃತ ದರದಲ್ಲಿ ಕೆಲಸ ಆರಂಭಿಸಬೇಕಾದರೆ ಪಾಲಿಕೆಯಿಂದ ಅಧಿಕೃತವಾಗಿ ಅನುಮತಿ ಪತ್ರ ನೀಡಬೇಕಿದೆ. ಹಾಗಾಗಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅವರಿಂದ ಸೂಕ್ತ ನಿರ್ದೇಶನ ಪಡೆದು ಅನುಮತಿ ಪತ್ರವನ್ನು ನೀಡಬೇಕೆಂದು ಹೇಳಿದರು.
ಶೀಘ್ರವೇ ಅನುಮತಿ ಪತ್ರ ದೊರಕಿಸಿಕೊಟ್ಟಲ್ಲಿ ಮನೆಗಳಿಗೆ ಪೈಪ್ಲೈನ್ ಮುಖಾಂತರ ಗ್ಯಾಸ್ ವಿತರಿಸುವ ಯೋಜನೆ ವೇಗವಾಗಿ ನಡೆಯಲಿದೆ. ಮುಖ್ಯ ಪೈಪ್ಲೈನ್ ಹಾಗೂ ಇದರಿಂದ ಬಡಾವಣೆಗಳಿಗೆ ಪೈಪ್ಲೈನ್ ಅಳವಡಿಸುವುದು, ಮನೆಗಳಿಗೆ ಸಂಪರ್ಕಕ್ಕಾಗಿ ಪೈಪ್ಲೈನ್ ಮಾಡುವ ಕಾಮಗಾರಿಯನ್ನು ಏಕ ಕಾಲದಲ್ಲಿ ಕಂಪನಿ ಆರಂಭಿಸಲಿದೆ ಎಂದರು.
ಮೈಸೂರಿನ ವಿಜಯನಗರ, ಕುವೆಂಪುನಗರ, ದಟ್ಟಗಳ್ಳಿ, ಟಿ.ಕೆ.ಬಡಾವಣೆ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಮುಖ್ಯ ಪೈಪ್ಲೈನ್ ಕಾಮಗಾರಿ ಆಗಿದೆ. ಇದರಲ್ಲಿ ಮುಖ್ಯ ಪೈಪ್ಲೈನ್ನಿಂದ 10ಸಾವಿರ ಮನೆಗಳಿಗೆ ಪ್ಲಂಬಿಂಗ್ ಕೆಲಸ ಮಾಡಲಾಗಿದೆ. ಒಂದು ವರ್ಷದಿಂದ ವಿಜಯನಗರ 2ನೇ ಹಂತದಲ್ಲಿರುವ 500 ಮನೆಗಳಲ್ಲಿ ಈ ಮಾದರಿ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಸೇರಿದಂತೆ ಇತರರಿದ್ದರು.