ನಂಜನಗೂಡು: ಪತ್ನಿಯೊಂದಿಗೆ ವಿಡಿಯೋ ಕಾಲ್ ಮಾಡಿಕೊಂಡು ಮಾತನಾಡುತ್ತಿದ್ದ ಪತಿರಾಯ ರೈಲು ಬರುವುದನ್ನು ಕಾಣದೆ ರೈಲಿಗೆ ತಾಕಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಗ್ರಾಮದಲ್ಲಿ ನಡೆದಿದೆ. ಬಿಹಾರ ಮೂಲಕ 27 ವರ್ಷದ ಮನು ಕುಮಾರ್ ಮೃತ ವ್ಯಕ್ತಿಯಾಗಿದ್ದಾನೆ.
ಮನು ಕುಮಾರ್ ದೊಡ್ಡ ಕವಲಂದೆ ಗ್ರಾಮದಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ. ಇಂದು ಮಂಗಳವಾರ ಬೆಳಿಗ್ಗೆ 7:40 ಸಮಯದಲ್ಲಿ ಬಯಲು ಶೌಚ ಗೃಹಕ್ಕೆ ತೆರಳಿ ಕೆರೆಯಲ್ಲಿ ನೀರು ತೆಗೆದುಕೊಂಡು, ಪತ್ನಿಯೊಂದಿಗೆ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮಾತನಾಡಿಕೊಂಡು ಬರುತ್ತಿದ್ದಾಗ ಚಾಮರಾಜನಗರ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ರೈಲು ತಾಕಿದೆ.
ರೈಲು ಬರುತ್ತಿರುವುದನ್ನೇ ಕಾಣದೆ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ರೈಲು ತಾಕಿದ ಪರಿಣಾಮ ವ್ಯಕ್ತಿ ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯ ಆರ್ಪಿಎಫ್ ಜಗನ್ನಾಥ್, ಪೊಲೀಸ್ ಸಿಬ್ಬಂದಿಗಳಾದ ಶ್ರೀನಿವಾಸ್, ಕುಮಾರ್, ಭೇಟಿ ನೀಡಿ, ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.