ಮೈಸೂರು: ಮೈಸೂರು ಅಭಿವೃದ್ಧಿಯ ವಿಚಾರವಾಗಿ ಸಂಸದ ಪ್ರತಾಪ್ಸಿಂಹ ಅವರೊಂದಿಗೆ ಚರ್ಚೆ ನಡೆಸಲು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಯತ್ನ ಮಂಗಳವಾರ ಮತ್ತೊಮ್ಮೆ ಭಗ್ನಗೊಂಡಿದೆಯಾದರೂ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ.
ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಿಂದ ಎರಡು ಕತ್ತೆಗಳು ಹಾಗೂ ಎರಡು ಹಂದಿಗಳ ಜತೆಗೆ ಲಕ್ಷ್ಮಣ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಇರುವ ಕಡತವೊಂದನ್ನು ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆ ಪ್ರಾರಂಭಿಸಿದರು. ಲಕ್ಷ್ಮಣ್ ಅವರೊಂದಿಗೆ ಕೆಪಿಸಿಸಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್.ಗೌಡ, ಮಾಜಿ ಮಹಾಪೌರ ಅಯೂಬ್ಖಾನ್ ಮತ್ತಿತರರು ಜೊತೆಗೂಡಿದ್ದರು. ಜೆಎಲ್ಬಿ ರಸ್ತೆಯ ಮೂಲಕ ದಾಸಪ್ಪ ಸರ್ಕಲ್ ತನಕ ಮೆರವಣಿಗೆ ಹೊರಟಿತು. ಅಲ್ಲಿ ಬ್ಯಾರಿಕೇಡ್ ಹಾಕಿಕೊಂಡು ನಿಂತಿದ್ದ ಪೊಲೀಸರು ಮೆರವಣಿಗೆಗೆ ತಡೆಯೊಡ್ಡಿದರು.
ಆಗ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಮಾತನಾಡಿ, ನಾವು ಯಾರು ಸಂಸದರ ಕಚೇರಿಗೆ ಮೆರವಣಿಗೆ ಹೋಗುವುದಿಲ್ಲ. ಲಕ್ಷ್ಮಣ್ ಒಬ್ಬರೇ ಹೋಗುತ್ತಾರೆ. ತಾವೇನು ನಿಷೇಧಾಜ್ಞೆ ಜಾರಿಗೊಳಿಸಿಲ್ಲ. ಆದ್ದರಿಂದ ಮೆರವಣಿಗೆ ಹೋಗಬಹುದಲ್ಲ ಎಂದು ಪೊಲೀಸರನ್ನು ಪ್ರಶ್ನಿಸಿದರು. ಈ ವಿಚಾರವಾಗಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಈ ಮಧ್ಯೆ ಮಾಜಿ ಮೇಯರ್ ಅಯೂಬ್ಖಾನ್ ಮಾತನಾಡಿ, ಲಕ್ಷ್ಮಣ್ ಅವರೇನೂ ಬಾಂಬ್ ಕಟ್ಟಿಕೊಂಡು ಹೋಗುತ್ತಿಲ್ಲ. ಸಿದ್ದರಾಮಯ್ಯ ಅವರ ಅಭಿವೃದ್ಧಿ ಕೆಲಸಗಳ ಪಟ್ಟಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರೊಬ್ಬರನ್ನು ಬಿಡಿ ಎಂದರು. ಇದಕ್ಕೆ ಒಪ್ಪದ ಪೊಲೀಸರು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ನಾವು ಅನುಮತಿ ಕೊಡುವುದಿಲ್ಲ. ನೀವು ಬೇಕಿದ್ದರೆ ತಟಸ್ಥ ಸ್ಥಳದಲ್ಲಿ ಚರ್ಚೆ ಮಾಡಿಕೊಳ್ಳಿ ಎಂದರು. ಕೊನೆಗೆ ಲಕ್ಷ್ಮಣ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ವಾಹನದಲ್ಲಿ ಕುಳ್ಳಿರಿಸಿದರು.
ಮತ್ತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೆಲ ಕಾಲದ ಬಳಿಕ ಲಕ್ಷ್ಮಣ್ ಅವರನ್ನು ವಾಹನದಿಂದ ಕೆಳಗಿಳಿಸಲಾಯಿತು. ಪೊಲೀಸರು ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದರು. ದಾಸಪ್ಪ ಸರ್ಕಲ್ನಲ್ಲಿ ಬಂದ್ ಮಾಡಿದ ಟ್ರಾಫಿಕ್ ಅನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.