ಸರಗೂರು: ಮೈಸೂರು ನಗರ ಮತ್ತು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕರಾದ ಬಿ ಮಂಜುನಾಥ್ ಅವರು ಜಿಲ್ಲೆಯ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಂಥಾಲಯಗಳಿಗೆ ಸೈಕಲ್ ಮೂಲಕವೇ ತೆರಳಿ ಪರಿಶೀಲನೆ ನಡೆಸುತ್ತಿದ್ದು, ಅವರ ಸೈಕಲ್ ಪ್ರೇಮ ಎಲ್ಲರ ಗಮನಸೆಳೆದಿದೆ.
ಸಾಮಾನ್ಯವಾಗಿ ಅಧಿಕಾರಿಗಳೆಂದರೆ ಎಲ್ಲೇ ಹೋಗಬೇಕಾದರೂ ಸರ್ಕಾರದ ವಾಹನ ಬೇಕೆಂದು ಬಯಸುತ್ತಾರೆ. ಆದರೆ ಮಂಜುನಾಥ್ ಮಾತ್ರ ಇದಕ್ಕೆ ವಿರುದ್ಧ ವಾಗಿದ್ದು, ಸೈಕಲ್ ಮೂಲಕವೇ ತೆರಳುತ್ತಾರೆ. ಅಷ್ಟೇ ಅಲ್ಲದೆ, ಸೈಕ್ಲಿಂಗ್ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಸೈಕ್ಲಿಂಗ್ ನಿಂದ ಇಂಧನ ಉಳಿತಾಯದೊಂದಿಗೆ ಆರೋಗ್ಯಕ್ಕೂ ಸಹಕಾರಿ ಎನ್ನುವುದನ್ನು ಅವರು ಸಮಾಜಕ್ಕೆ ತೋರಿಸಿಕೊಡುತ್ತಿದ್ದಾರೆಯಲ್ಲದೆ, ಹೀಗೂ ಒಬ್ಬ ಅಧಿಕಾರಿ ಕಾರ್ಯ ನಿರ್ವಹಿಸಬಹುದು ಎಂಬುದರ ಮೂಲಕ ಇತರೆ ಅಧಿಕಾರಿಗಳಿಗೂ ಮಾದರಿಯಾಗಿದ್ದಾರೆ.
ಈಗಾಗಲೇ ಮೈಸೂರಿನಿಂದ ತಾಲೂಕು ಕೇಂದ್ರಗಳಾದ ಕೆ.ಆರ್ ನಗರ, ಹುಣಸೂರು, ಎಚ್ ಡಿ ಕೋಟೆಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡಿ, ಮಾರನೆಯ ದಿನ ಎಚ್.ಡಿ.ಕೋಟೆಯಿಂದ ಹೊರಟು ಹ್ಯಾಂಡ್ ಪೋಸ್ಟ್ ಸರಗೂರು ಮಾರ್ಗವಾಗಿ ಸುತ್ತಮುತ್ತ ಇರುವ ಗ್ರಂಥಾಲಯಗಳನ್ನು ವೀಕ್ಷಿಸಿ ಮುಳ್ಳೂರು, ನಂಜನಗೂಡು, ತಿ.ನರಸೀಪುರ, ಬನ್ನೂರು ಮಾರ್ಗವಾಗಿ ಮೈಸೂರನ್ನು ಸೇರುತ್ತಾರೆ. ಆ ಮೂಲಕ ಇಡೀ ಜಿಲ್ಲೆಯನ್ನು ಸೈಕಲ್ ನಲ್ಲಿಯೇ ಸುತ್ತಾಡುತ್ತಿರುವುದು ಗಮನಾರ್ಹವಾಗಿದೆ. ಕೋವಿಡ್ ಸಂದರ್ಭದಲ್ಲಿ ಅವರನ್ನು ಹೆಚ್.ಡಿ.ಕೋಟೆಯ ಬಾವಲಿ ಚೆಕ್ ಪೋಸ್ಟ್ ಗೆ ಕೋವಿಡ್ ಅಧಿಕಾರಿಯಾಗಿ ನೇಮಿಸಿದ ವೇಳೆ ನೂರು ಕಿಲೋಮೀಟರ್ ಗಿಂತ ಹೆಚ್ಚು ದೂರ ಸೈಕಲ್ ನಲ್ಲಿಯೇ ಹೋಗಿ ಬರುತ್ತಿದ್ದದ್ದು ವಿಶೇಷವಾಗಿತ್ತು.
ಈ ನಡುವೆ ಸೈಕಲ್ ನಲ್ಲಿ ಸರಗೂರಿಗೆ ಆಗಮಿಸಿದ ವೇಳೆ ಮಂಜುನಾಥ್ ಅವರನ್ನು ಸರಗೂರಿನ ವೃತ್ತನಿರೀಕ್ಷಕ ಆನಂದ್ ಹಾಗೂ ಪಿಎಸ್ಐ ಜಯಪ್ರಕಾಶ್ ರವರು ಆತ್ಮೀಯವಾಗಿ ಸ್ವಾಗತಿಸಿ ಬೀಳ್ಕೊಟ್ಟು ಅಧಿಕಾರಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ತಾವೊಬ್ಬರೇ ಸಂಬಂಧಪಟ್ಟಂತಹ ಗ್ರಂಥಾಲಯಗಳಿಗೆ ಹೋಗಿ ಕುಂದುಕೊರತೆ ವಿಚಾರಿಸುವುದು, ಸಮಸ್ಯೆ ಬಗೆಹರಿಸುವುದನ್ನು ಮಾಡುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.