ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸರಗೂರು ತಾಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶದಲ್ಲಿ ಹುಲಿಯ ಕಳೇಬರ ದೊರೆತಿದ್ದು, ಎರಡು ಹುಲಿಗಳ ನಡುವಿನ ಕಾದಾಟದಿಂದಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯ ಮೊಳೆಯೂರು ವಲಯದಲ್ಲಿ ಮೊಳೆಯೂರು ಶಾಖೆಯ ನಡಾಡಿ ಗಸ್ತಿನಲ್ಲಿ ಸಿಬ್ಬಂದಿಗಳು ಇದ್ದ ವೇಳೆ ಸೆನ್ಸ ಲೈನ್ ಸಮೀಪದಲ್ಲಿ ಸುಮಾರು 1 ರಿಂದ 2 ವರ್ಷದ ಹುಲಿಯ ಕಳೇಬರ ಪತ್ತೆಯಾಗಿತ್ತು. ಮೃತ ಹುಲಿಯ ಕತ್ತು ಮುರಿದಿರುವುದರಿಂದ ಮತ್ತೊಂದು ಹುಲಿಯ ಕಾದಾಟದಿಂದಾಗಿ ಮೃತಪಟ್ಟಿರಬಹುದು ಎಂದು ಇಲಾಖೆ ದೃಢಪಡಿಸಿದೆ.
ಕಾಡುನಾಯಿಗಳು, ಮಾಂಸದ ಕಳೇಬರವನ್ನು ತಿನ್ನುವ ಜೀವಿಗಳು ಹುಲಿಯ ಮೃತದೇಹವನ್ನು ತಿಂದಿರುವುದರಿಂದ ಹುಲಿಯ ಲಿಂಗ ಪತ್ತೆಯಾಗಿಲ್ಲ. ಬದಲಿಗೆ 1 ರಿಂದ 2 ವರ್ಷ ವಯಸ್ಸಿರಬಹುದು ಎಂದು ಮರಣೊತ್ತರ ಪರೀಕ್ಷೆ ನಡೆಸಿದ ಇಲಾಖಾ ಪಶುವೈದ್ಯಾಧಿಕಾರಿ ಡಾ.ವಾಸಿಂ ಮಿರ್ಜಾ ಅವರು ತಿಳಿಸಿದ್ದಾರೆ. ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ವಿಧಾನದಂತೆ ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹವನ್ನು ಅಗ್ನಿಸ್ಪರ್ಶ ಮಾಡಲಾಯಿತು.
ಹುಲಿ ಯೋಜನೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿಂಗರಾಜು, ಆನೆ ಯೋಜನೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್, ಸಿಎಫ್ ಡಾ.ಪಿ.ರಮೇಶ್ಕುಮಾರ್, ವಿಶೇಷ ಹುಲಿ ಸಂರಕ್ಷಣಾ ದಳ ಅರಣ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ನವೀನ್, ಎಸಿಎಫ್ ಕೆ.ಪರಮೇಶ್, ವನ್ಯಜೀವಿ ಮಂಡಳಿ ಸದಸ್ಯೆ ಕೃತಿಕಾ ಆಲನಹಳ್ಳಿ, ಎನ್ಜಿಓ ರಘುರಾಂ, ಆರ್ಎಫ್ಒ ಪುನೀತ್, ಗ್ರಾಮ ಪಂಚಾಯಿತಿ ಸದಸ್ಯ ಮಂಜು, ಯೋಗೇಶ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.