ಮೈಸೂರು: ರಾಜ್ಯದ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿದು ಹೋಗಿದ್ದು, ಮೂರು ತಿಂಗಳ ಹಿಂದೆ ನೀರು ಹರಿಸಿದ ವೇಳೆ ಅದನ್ನು ವಿರೋಧಿಸಿ ಆರಂಭಿಸಿ ಪ್ರತಿಭಟನೆ ಮುಂದುವರೆದುಕೊಂಡು ಬಂದಿದ್ದು ಬುಧವಾರಕ್ಕೆ 100 ದಿನವನ್ನು ಪೂರೈಸಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿ ನಗರದ ಪುರಭವನದ ಬಳಿ ನೂರನೇ ದಿನದ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ಪ್ರಗತಿಪರರು ಧರಣಿಗೆ ಬೆಂಬಲ ಸೂಚಿಸಿ, ಶಾಶ್ವರ ಪರಿಹಾರ ನೀಡುವಂತೆ ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ ಮಾತನಾಡಿ, ಬರಗಾಲದ ಸಮಯದಲ್ಲೂ ತಮಿಳುನಾಡಿಗೆ ನೀರು ಬಿಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡುತ್ತಲೇ ಇದೆ. ಕುಡಿಯುವ ನೀರಿಗೂ ತತ್ವಾರವಾಗಿದೆ. ಅದನ್ನು ಪ್ರಶ್ನಿಸದೇ ಸರ್ಕಾರ ನೀರು ಹರಿಸುತ್ತಿದೆ ಎಂದು ಕಿಡಿ ಕಾರಿದರು.
ಕಾವೇರಿ ಕಣಿವೆಯ ಜನರಿಗೆ ನ್ಯಾಯ ಸಿಗಬೇಕು. ಕಳೆದ 99 ದಿನಗಳಿಂದಲೂ ನಾಗರಿಕರು, ಆಟೊ ಚಾಲಕರು, ವರ್ತಕರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಧರಣಿಗೆ ಬೆಂಬಲ ನೀಡಿವೆ. ನಿರಂತರ ಹೋರಾಟ ನಡೆಸುತ್ತಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ನಮ್ಮದು ಶಾಂತಿಯುತ ಹೋರಾಟ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು, ಎಂ.ಜೆ.ಸುರೇಶ್ಗೌಡ, ತೇಜಸ್ ಲೋಕೇಶ್ ಗೌಡ, ಬಾಲಕೃಷ್ಣ, ಹನುಮಂತೇಶ್, ಸಿದ್ಧಲಿಂಗಪ್ಪ, ಎಸ್.ಬಸಪ್ಪ, ನಂಜುಂಡಸ್ವಾಮಿ, ಮಹದೇವಸ್ವಾಮಿ, ಶುಭಶ್ರೀ, ಪುಷ್ಪಾವತಿ, ಮಂಜುಳಾ, ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.