ಮೈಸೂರು: ಕೋಟ್ಯಂತರ ಹಿಂದೂಗಳ ರಾಮಮಂದಿರ ನಿರ್ಮಾಣದ ಕನಸು ಜ. 22ಕ್ಕೆ ನನಸಾಗಲಿದೆ. ಈ ದಿನ ಮಂದಿರದ ಭವ್ಯ ಉದ್ಘಾಟನೆ ಹಾಗೂ ಬಾಲ ರಾಮನ (ರಾಮಲಲಾ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿ ಮಂತ್ರಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆ ಮತ್ತು ಶ್ರೀ ರಾಮನ ಭಾವಚಿತ್ರ ಮನೆಮನೆಗೆ ತಲುಪಿಸುವ ಮೂಲಕ ಸಂಭ್ರಮಿಸಿದರು.
ಈ ವೇಳೆ ಹಿರಿಯ ಸಮಾಜಸೇವಕ ಕೆ ರಘುರಾಮ ವಾಜಪೇಯಿ ಮಾತನಾಡಿ ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮವು ಕೇವಲ ಹಿಂದೂಗಳು ಮಾತ್ರವಲ್ಲ, ಇಡೀ ಭಾರತ ದೇಶದ ಹೆಮ್ಮೆ. ನೂರಾರು ವರ್ಷಗಳ ಸಾಧುಸಂತರ ತಪಸ್ಸಿನ ಫಲ. ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ಸಂಸ್ಕಾರ ಹೀನರಾಗುತ್ತಿರುವ ಯುವಕರಿಗೆ ಮರ್ಯಾದಾ ಪುರುಷ ರಾಮನ ಜೀವನವೇ ಸ್ಫೂರ್ತಿ, ಯುವಕರು ಆಧ್ಯಾತ್ಮದ ಆಸರೆ, ಸತತ ಪರಿಶ್ರಮದ ತಳಹದಿಯ ಮೇಲೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಇದರಿಂದ ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಮಾತನಾಡಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮವನ್ನು ಜಾತಿ, ಮತ, ಪಂಥ ಮರೆತು ಆನಂದೋತ್ಸವದಿಂದ ಆಚರಿಸಬೇಕು. ಇದರಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕಿರುವ ಕಾರಣ ಅಂದು ಶಾಲೆಗಳಿಗೆ ಸರ್ಕಾರವು ರಜೆ ಘೋಷಿಸಬೇಕು ಎಂದು ಮನವಿ ಮಾಡಿದರು.
ಇಂದಿನ ಯುವ ಪೀಳಿಗೆಗೆ ಶ್ರೀರಾಮನ ಆದರ್ಶಗಳು ಮಾರ್ಗದರ್ಶನವಾಗಿ ಅವುಗಳ ಆಚರಣೆಯೊಂದಿಗೆ ಅವರ ಭವಿಷ್ಯವು ಉಜ್ವಲವಾಗುತ್ತದೆ. ಅದಕ್ಕಾಗಿ ಈ ಸತ್ಕಾರ್ಯದಲ್ಲಿ ಅವರಿಗೂ ಅವಕಾಶ ಕಲ್ಪಿಸಬೇಕು ಎಂದರು.
ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಹಾಲಿ ನಿರ್ದೇಶಕರಾದ ಎಂ.ಆರ್.ಬಾಲಕೃಷ್ಣ, ಕೆ.ಎನ್.ಅರುಣ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವಿ ಎನ್ ಕೃಷ್ಣ, ಪೇಪರ್ ಮುರಳಿ, ಮಹೇಶ್ ಕುಮಾರ್, ಮಾಜಿನಗರ ಪಾಲಿಕಾ ಸದಸ್ಯರಾದ ಯಮುನಾ, ಪುಟ್ಟಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.