ಸರಗೂರು: ತಾಲೂಕಿನ ಅಧಿದೇವತೆ ಚಿಕ್ಕದೇವಮ್ಮನ ಬೆಟ್ಟದಲ್ಲಿ ಸೋಮವಾರ ಭೀಮನ ಅಮಾವಾಸ್ಯೆಯ ವಿಶೇಷ ಪೂಜೆ ವಜೃಂಭಣೆಯಿಂದ ನಡೆದಿದ್ದು, ಈ ವೇಳೆ ದೇಗುಲಕ್ಕೆ ಆಗಮಿಸಿದ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಭೀಮನ ಅಮಾವಾಸ್ಯೆ ಹಿನ್ನಲೆಯಲ್ಲಿ ಬೆಟ್ಟದ ಚಿಕ್ಕದೇವಮ್ಮ ತಾಯಿಯನ್ನು ಮುತ್ತು ಮತ್ತು ನಿಂಬೆಹಣ್ಣು, ವಿವಿಧ ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು. ಬೆಳಗ್ಗೆ 6ಗಂಟೆಯಿಂದಲೇ ತಾಯಿಗೆ ಪಂಚಾಮೃತಾಭಿಷೇಕ, ಹೋಮ-ಹವನ ಸೇರಿದಂತೆ ನಾನಾ ಬಗೆಯ ಪೂಜಾ ಕಾರ್ಯಕ್ರಮ ನೆರವೇರಿತು.
ಆಷಾಢದ ಕೊನೆಯ ಅಮಾವಾಸ್ಯೆಯಾದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದು ಪುನೀತರಾದರು. ನವ ವಧು-ವರರು ಬೆಟ್ಟಕ್ಕೆ ಆಗಮಿಸಿ, ನಮ್ಮ ಮುಂದಿನ ಬದುಕು ಬಂಗಾರವಾಗಲಿ ಎಂದು ಹರಸಿ, ತಾಯಿಗೆ ವಿಶೇಷ ಪೂಜೆ ನೆರವೇರಿಸಿದರು.
ಬೆಳಗ್ಗೆಯಿಂದಲೆ ದೇವರ ಉತ್ಸವಮೂರ್ತಿಯನ್ನು ಪ್ರಕಾರೋತ್ಸವ ಮಾಡಲಾಯಿತು, ಕುಂಕುಮಾರ್ಚನೆ ನೆರವೇರಿಸಲಾಯಿತು. ನಂತರ ರಾಜೋಪಚಾರ ಪೂಜೆ ನಡೆಯಿತು. ಭಕ್ತರಿಗೆ ಸಿಹಿ ವಿತರಣೆ ಮಾಡಲಾಯಿತು. ಇದಲ್ಲದೆ ತಾಯಿಯ ಎದುರುಗಡೆ ಇರುವ ಕಾಲಭೈರವೇಶ್ವರಸ್ವಾಮಿಗೆ ಹೂವಿನ ಅಲಂಕಾರಗೊಳಿಸಲಾಗಿತ್ತು. ಅದೇ ರೀತಿ ಭೀಮೇಶ್ವರ ಮೂರ್ತಿಗೂ ವಿಶೇಷವಾಗಿ ಶೃಂಗರಿಸಿ, ಪೂಜೆ ನೆರವೇರಿಸಲಾಯಿತು.
ಇಲ್ಲಿಗೆ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರ ದರ್ಶನಕ್ಕೆ ಅನುಕೂಲವಾಗಲೆಂದು ಸರಗೂರು ಪೊಲೀಸ್ ಠಾಣೆ ಉಪನಿರೀಕ್ಷಕ ಸಿ ನಂದೀಶ್ಕುಮಾರ್ ನೇತೃತ್ವದಲ್ಲಿ ಬಾರಿ ಪೊಲೀಸ್ ಬಂದ್ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನದ ಇಒ ರಘು, ಪಾರುಪತ್ತೇದಾರರಾದ ಶಾಂತಿಪುರ ಮಹದೇವಸ್ವಾಮಿ, ಆರ್ಚಕರಾದ ಲಿಂಗಪ್ಪ, ಮಣಿ, ಮನು, ನಿಂಗರಾಜು, ಸಂತೋಷ್, ಮಹದೇವಸ್ವಾಮಿ, ಪ್ರಸನ್ನ, ದೇವಣ್ಣ, ಪ್ರಸನ್ನಕುಮಾರ್, ಶಿವಕುಮಾರ್, ಚಿಕ್ಕದೇವಣ್ಣ, ವೀರಣ್ಣ ಹಾಗೂ ಸಿಬಂದ್ದಿಗಳಾದ ಕೃಷ್ಣ ಇನ್ನಿತರರು ಹಾಜರಿದ್ದರು.