ನಂಜನಗೂಡು: ತಾಲ್ಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಸಭೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನನ್ನ ಅಧಿಕಾರದ ಅವಧಿಯಲ್ಲಿ ಮಠಮಾನ್ಯಗಳಿಗೆ ವಿಶೇಷ ಅನುದಾನವನ್ನು ನೀಡಿದ್ದೆ. ನಾನು ಯಾವುದೇ ಭೇದ ಭಾವವನ್ನು ಮಾಡಿಲ್ಲ. ಗ್ರಾಮೀಣ ಸೊಗಡಿನ ಜಾತ್ರೆಯನ್ನು ಸುತ್ತೂರಿನಲ್ಲಿ ಆಚರಣೆ ಮಾಡಿಕೊಂಡು ಬರುತ್ತಿರುವುದು ಸಂತೋಷದ ವಿಚಾರ. ಶ್ರೀಗಳು ನಮಗೆ ಸಾಕಷ್ಟು ಸಹಕಾರವನ್ನು ನೀಡಿದ್ದರು. ಶ್ರೀ ಮಠವು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ.
ರಾಜ್ಯದಲ್ಲಿ ತೀವ್ರ ಬರಗಾಲ ವಾತಾವರಣ ನಿರ್ಮಾಣವಾಗುತ್ತಿದೆ. ಕೆಆರ್ಎಸ್ ಮತ್ತು ಕೆರೆಗಳಲ್ಲಿ ನೀರು ಇಲ್ಲದೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಶೇಕಡ 25 ರಷ್ಟು ಬೆಳೆಯನ್ನು ಸಹ ಈ ಬಾರಿ ರೈತರು ಬೆಳೆದಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ಪರಿಹಾರವನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ, ಸಂಕಷ್ಟದಲ್ಲಿರುವ ರೈತರ ಪರವಾಗಿ ನಾವು ಇರಬೇಕು ಈ ಬಗ್ಗೆ ರಾಜ್ಯದಲ್ಲಿ ನಾನು ಪ್ರವಾಸವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಶಾಂತಲಿಂಗೇಶ್ವರ ಮಹಾ ಸ್ವಾಮೀಜಿ, ಗೋವಾದ ರಾಜ್ಯಪಾಲರಾದ ಶ್ರೀಧರನ್ ಪಿಳ್ಳೈ, ಮಾಜಿ ಸಚಿವ ಮಾಧುಸ್ವಾಮಿ, ಮುರುಗೇಶ್ ಆರ್. ನಿರಾಣಿ, ಶಾಸಕ ಶ್ರೀ ವತ್ಸ ಸೇರಿದಂತೆ ಹಲವರು ಭಾಗವಹಿಸಿದ್ದರು.