News Karnataka Kannada
Saturday, April 27 2024
ಮೈಸೂರು

ಮೈಸೂರಿನಲ್ಲಿ ದಳಪತಿಗಳಿಂದ ಶಕ್ತಿಪ್ರದರ್ಶನ

A show of strength by the captains in Mysore
Photo Credit : By Author

ಮೈಸೂರು: ರಾಜ್ಯದ 88ವಿಧಾನಸಭಾ ಕ್ಷೇತ್ರಗಳಲ್ಲಿ 110 ದಿನಗಳ ಕಾಲ ಸಂಚರಿಸಿದ ಪಂಚರತ್ನ ಯಾತ್ರೆ ದಳಪತಿಗಳ ಶಕ್ತಿ ಪ್ರದರ್ಶನದೊಂದಿಗೆ, ಲಕ್ಷಾಂತರ ಕಾರ್ಯಕರ್ತರ ಜಯಘೋಷಗಳ ನಡುವೆ ಭಾನುವಾರ ಸಮಾರೋಪಗೊಂಡಿದೆ.

ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ಜ್ವಾಲಾಮುಖಿ ತ್ರಿಪುರಸುಂದರಿ ದೇಗುಲ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೇ ಸೇರಿದ್ದ ಲಕ್ಷಾಂತರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜಯಘೋಷಗಳ ನಡುವೆ ಜೆಡಿಎಸ್‌ನ ಪಂಚರತ್ನ ರಥಯಾತ್ರೆಯ ಸಮಾರೋಪ ಅದ್ದೂರಿಯಾಗಿ ನಡೆಯಿತು. ಈ ಮೂಲಕ ಜೆಡಿಎಸ್ ಚುನಾವಣೆ ಅಧಿಕೃತವಾಗಿ ಘೋಷಣೆಯಾಗುವುದಕ್ಕೂ ಮುನ್ನವೇ ಚುನಾವಣಾ ಪ್ರಚಾರ ಆರಂಭಿಸಿತು.

ಸಮಾವೇಶದಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಇಷ್ಟು ವರ್ಷದ ಸುಧೀರ್ಘ ರಾಜಕಾರಣದಲ್ಲಿ ಅಧಿಕಾರದಲ್ಲಿದ್ದದ್ದು ಅತ್ಯಂತ ಕಡಿಮೆ ಅವಧಿಗೆ. ಈ ಸಮಯದಲ್ಲಿ ಕರ್ನಾಕಕ್ಕೆ ಕೆಟ್ಟ ಹೆಸರು ತರುವಂತಹ ಯಾವುದೇ ಕೆಲಸ ಮಾಡಿಲ್ಲ. ನಮ್ಮನ್ನು, ಪಕ್ಷವನ್ನು ಹಾಗೂ ನಮ್ಮ ದುಡಿಮೆಯನ್ನು ನಂಬಿ ಈ ಬಾರಿ ಸೇವೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ನಾನು ಜೀವನದಲ್ಲಿ ಬೆಳೆದಿದ್ದು, ರಾಜಕೀಯದಲ್ಲಿ ಬೇರೂರಿದ್ದು ನಮ್ಮ ಪಕ್ಷದ ಕಾರ್ಯಕರ್ತರಿಂದ ಹಾಗೂ ದೇವರ ದಯೆಯಿಂದ. ಎಷ್ಟೇ ಕಷ್ಟ ಬಂದರೂ ಧೃತಿಗೆಡದಂತೆ ನಡೆಸಿದ್ದು ಎರಡೂ ಶಕ್ತಿಗಳು. ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಇಂದು ನಿಮ್ಮ ಮುಂದೆ ನಿಲ್ಲುವ ಶಕ್ತಿ ಇರುತ್ತದೆಯೋ ಇಲ್ಲವೋ ಎಂದುಕೊಂಡಿದ್ದೆ. ಆದರೆ ಇಷ್ಟು ಶಕ್ತಿ ನೀಡಿದ್ದಾನೆ ಎಂದರೆ ಏನೋ ಆಟ ಇರಬೇಕು ಎಂದುಕೊಂಡಿದ್ದೇನೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಸೇರಿರುವುದು ನೋಡಿದರೆ ಮತ್ತೆ ನಮಗೆ ಜನ ಸೇವೆಗೆ ಅವಕಾಶ ಸಿಗುತ್ತದೆ ಎಂದು ನಾನು ನಂಬಿದ್ದೇನೆ ಎಂದರು.

ಕಾರ್ಯಕರ್ತರ ಶ್ರಮದಿಂದ ನಮ್ಮ ಪಕ್ಷ ಗುರಿ ಮುಟ್ಟುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ನಾನು ರೈತನ ಮಗ, ನೀವೂ ರೈತನ ಮಕ್ಕಳು. ನಾವು ಶ್ರಮವಹಿಸಿ ಅನ್ನ ತಿನ್ನುತ್ತೇವೆ. ಇಲ್ಲಸಲ್ಲದ ಬಣ್ಣದ ಮಾತುಗಳಿಂದ ಮೇಲೆ ಬರಲು ಪ್ರಯತ್ನಿಸುವುದಿಲ್ಲ. ಜಾತಿ ವೈಷಮ್ಯದಿಂದ ಒಡೆದು ಆಳುವುದಿಲ್ಲ. ಈ ಹಿಂದೆ ಬ್ರಿಟಿಷರು ಅದನ್ನು ಮಾಡುತ್ತಿದ್ದರು. ಆದರೆ ಈಗ ಕೆಲವು ಪಕ್ಷಗಳು ಅಂತಹ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವರು ಹಾಗೆ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಇಂತಹ ಕೆಲಸವನ್ನು ಜನರು ಅರಿಯುತ್ತಾರೆ. ಸುಳ್ಳು ಸ್ವಲ್ಪ ದಿನ ನಡೆಯಬಹುದು. ಸತ್ಯ ಮತ್ತೆ ಪುನರ್ಜನ್ಮ ಪಡೆಯುತ್ತದೆ ಎಂದು ತಿಳಿಸಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಳೆದ ೧೦೦ ದಿನಗಳ ಅವಧಿಯಲ್ಲಿ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪಂಚರತ್ನ ಯೋಜನೆಗಳನ್ನು ಜನ ಸ್ವೀಕರಿಸಿದ್ದಾರೆ. ೫ ವರ್ಷಗಳಲ್ಲಿ ಎರಡೂವರೆ ಲಕ್ಷ ಕೋಟಿ ಸಂಗ್ರಹಿಸಿ ಈ ಯೋಜನೆ ವಿನಿಯೋಗಿಸಲು ಗುರಿ ಇಟ್ಟುಕೊಂಡಿದ್ದು, ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಒಂದೇ ಒಂದು ಅವಕಾಶ ಕೊಡಿ. ಈ ನಾಡಿನ ಹೆಣ್ಣುಮಕ್ಕಳ ಕಣ್ಣೀರೊರೆಸುವ, ಯುವಕರಿಗೆ ಉದ್ಯೋಗ ನೀಡುವ, ರೈತರ ಸಮಸ್ಯೆಗಳನ್ನು ಪರಿಹರಿಸುವ ಅವಕಾಶವನ್ನು ನನಗೆ ಕೊಡಿ. ಈ ನಾಡನ್ನು ಸುವಣ್ಣರಾಜ್ಯ ಮಾಡಿ ತೋರಿಸುತ್ತೇನೆ. ೭೦ ವರ್ಷಗಳಲ್ಲಿ ಸಾಧ್ಯವಾಗದ್ದನ್ನು ೫ ವರ್ಷದಲ್ಲಿ ಸಾಧಿಸಿ ತೋರಿಸುತ್ತೇನೆ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಡಿ.ರೇವಣ್ಣ, ಸಾರಾ ಮಹೇಶ್, ಕೆ.ಮಹದೇವು, ಅಶ್ವಿನ್‌ಕುಮಾರ್, ಬಂಡೆಪ್ಪ ಕಾಶಪ್ಪನವರ್, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಎಂಎಲ್‌ಸಿಗಳಾದ ಶರವಣ, ಸಿ.ಎನ್.ಮಂಜೇಗೌಡ, ಜಿ.ಡಿ.ಹರೀಶ್‌ಗೌಡ ಜೆಡಿಎಸ್ ನಗರಾಧ್ಯಕ್ಷ ಚೆಲುವೇಗೌಡ, ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಕೆ.ವಿ.ಮಲ್ಲೇಶ್, ಕೆ.ವಿ.ಶ್ರೀಧರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರ ಅನುಮತಿ ಪಡೆದು ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಮ್ಮ ಹೋರಾಟದ ಬದುಕನ್ನು ನೆರೆದಿದ್ದ ಜನರ ಮುಂದೆ ತೆರೆದಿಟ್ಟರು. ವೇದಿಕೆಯಲ್ಲಿ ನಿರ್ಮಾಣಗೊಂಡಿದ್ದ ರ್‍ಯಾಂಪ್ ಮೇಲೆ ಗಾಲಿಕುರ್ಚಿಯಲ್ಲಿ ತೆರಳಿ ಜನರತ್ತ ಕೈಬೀಸಿದರು. ಅವರೊಂದಿಗೆ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ ಹೆಜ್ಜೆ ಹಾಕಿದರು. ಜನಸ್ತೋಮ ನೋಡಿದ ದೇವೇಗೌಡರು ಭಾವುಕರಾದರು. ಈ ವೇಳೆ ಕಾರ್ಯಕರ್ತರು, ಅಭಿಮಾನಿಗಳು ಜಯಘೋಷ ಕೂಗಿದ್ದು ವಿಶೇಷವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು