ಮಂಡ್ಯ: ಪ್ರಧಾನಿ ಮೋದಿಯವರಿಂದ ಶೀಘ್ರದಲ್ಲೇ ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾ ವಿ.ವಿ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು ಕ್ರೀಡಾ ಸಚಿವ ಡಾ. ಕೆ.ಸಿ ನಾರಾಯಣಗೌಡರು ಘೋಷಣೆ ಮಾಡಿದರು.
ಯುವಜನೋತ್ಸವನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವ ನಾರಾಯಣಗೌಡ, ಯುವಜನೋತ್ಸವ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ನಮ್ಮ ಪುಣ್ಯ. ಇಂತಹ ಸಂದರ್ಭದಲ್ಲಿ ಯುವಕರಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ನಾನು ಕ್ರೀಡಾ ಸಚಿವನಾಗಿ ಒಂದೂವರೆ ವರ್ಷವಾಗಿದೆ. ಅಧಿಕಾರವ ವಹಿಸಿಕೊಂಡ ತಕ್ಷಣ ಕರೋನ ಭಯದ ವಾತಾವರಣ ನಿರ್ಮಾಣ ಮಾಡಿದೆ. ಇದರಿಂದ ದೊಡ್ಡ ಕಾರ್ಯಕ್ರಮ ಮಾಡಲು ಸಾಧ್ಯವಾಗಿಲ್ಲ. ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹಿರಿಯ ಶ್ರೀಗಳಾದ ಬಾಲಗಂಗಾಧನಾಥ ಸ್ವಾಮೀಜಿಯವರು ದೊಡ್ಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಇಂತಹ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೆ ಎಂದು ಹೇಳಿದರು.
ಮೂರನೇ ಅಲೆ ಪ್ರಾರಂಭ ಆಗಿರುವುದರಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು. ದೇಶದಲ್ಲಿ ಶೇ 40ರಷ್ಟು ಯುವಕರು ಇದ್ದಾರೆ. ಇವರನ್ನು ಬೆಳೆಸಿದರೆ ದೇಶ ಬೆಳೆಸಿದಂತೆ. ಬಾಲಗಂಗಾಧರನಾಥ ಸ್ವಾಮೀಜಿಯವರು ಪುಟ್ಟ ಮಕ್ಕಳನ್ನು ದತ್ತು ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಹೀಗಾಗಿ ಚುಂಚನಗಿರಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಕ್ರೀಡಾ ಇಲಾಖೆಯಿಂದ ಕ್ರೀಡಾಸಕ್ತ ಮಕ್ಕಳನ್ನು ದತ್ತು ಪಡೆದುಕೊಂಡಿದ್ದೇವೆ. 2024ರ ವೇಳೆಗೆ 75 ಮಕ್ಕಳನ್ನು ಒಲಂಪಿಕ್ಸ್ ಗೆ ಕಳುಹಿಸುವ ಗುರಿಯನ್ನು ಹೊಂದಿದ್ದೇವೆ. ರಾಜ್ಯದಲ್ಲಿ ಕ್ರೀಡೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಾಗುವುದು ಎಂದು ಘೋಷಣೆ ಮಾಡಿದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಸುನಿಲ್ ಕುಮಾರ್, ಶಾಸಕ ಸುರೇಶ್ ಗೌಡ, ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಅಶ್ವಥಿ, ಎಸ್ ಪಿ ಎನ್ ಯತೀಶ್ ಇತರರಿದ್ದರು.