ಹುಣಸೂರು: ಮದುವೆ ಮುಗಿಸಿ ಕೊಡಗಿನತ್ತ ತೆರಳುತ್ತಿದ್ದ ಬೊಲೆರೋ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೊಡಗಿನ ಮೂಲದ ಆರು ಮಂದಿ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಹುಣಸೂರು-ವಿರಾಜಪೇಟೆ ರಸ್ತೆಯ ಅರಸು ಕಲ್ಲಹಳ್ಳಿ ಬಳಿ ಬುಧವಾರ ಸಂಜೆ ನಡೆದಿದೆ.
ಕೊಡಗು ಜಿಲ್ಲೆಯ ಪಾಲಿಬೆಟ್ಟದ ನಿವಾಸಿಗಳಾದ ಬಾಲಕೃಷ್ಣರ ಪುತ್ರ ವಾಹನ ಚಾಲಕ ಸಂತೋಷ್(47), ರಾಘವನ್ ಪುತ್ರ ಗುತ್ತಿಗೆದಾರ ಎಂ.ಆರ್.ಅನಿಲ್(44), ಸಂಕಪ್ಪ ರೈ ಪುತ್ರ ಟಿಪ್ಪರ್ ಚಾಲಕ ದಯಾನಂದ್ (42), ಗೋಪಾಲ್ ಪುತ್ರ ಟಾಟಾ ಪೆಟ್ರೋಲ್ ಬಂಕ್ ನೌಕರ ಬಾಬು(47), ಸೋಮು ಪುತ್ರ ಕೂಲಿ ಕಾರ್ಮಿಕ ರಾಜೇಶ್(42), ಬಾಳಪ್ಪ ಪುತ್ರ ಟ್ಯಾಕ್ಸಿ ಮಾಲೀಕ ವಿನೀತ್(32) ಮೃತಪಟ್ಟ ದುರ್ದೈವಿಗಳು.
ಕೀರ್ತನ( 22), ಎಂಜಲಿ(14) ಮತ್ತು ಫಿಲಿಫ್(65) ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವಿನೀತ್ ಮದುವೆ ಏಪ್ರಿಲ್ 23 ಮತ್ತು 24ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಘಟನೆಯಲ್ಲಿ ಮದುಮಗನೂ ಮೃತಪಟ್ಟಿದ್ದಾನೆ.
ಹುಣಸೂರು ನಗರದ ಜೈಕುಮಾರಿಯೊಂದಿಗೆ ಕೊಡಗು ಜಿಲ್ಲೆಯ ಪಾಲಿಬೆಟ್ಟ ಮೂಲದ ಸದಾನಂದರ ಜೊತೆಗೆ ಹುಣಸೂರು ನಗರದ ಅದುಲ್ಲಾಮ್ ಪಾರ್ಟಿ ಹಾಲ್ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದ ಮೃತರು ಮದುವೆ ಮುಗಿಸಿಕೊಂಡು ಸಂಜೆ 3.45ರ ವೇಳೆ ಪಾಲಿಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಚಾಲಕ ಸಂತೋಷ್ನ ನಿಯಂತ್ರಣ ತಪ್ಪಿ ಅರಸು ಕಲ್ಲಹಳ್ಳಿ ಬಳಿ ರಸ್ತೆ ಬದಿಯ ದೊಡ್ಡ ಆಲದ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮರದ ರೆಂಬೆಯು ವಾಹನ ಟಾಪ್ನ್ನು ಕಿತ್ತು ಬಡಿದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಹಿಂದೆ ಕುಳಿತಿದ್ದ ಇಬ್ಬರು ಯುವತಿಯರು, ವೃದ್ದರಿಗೂ ಸಹ ತೀವ್ರ ಪೆಟ್ಟು ಬಿದ್ದಿದೆ. ವಾಹನ ಹಿಂಬಾಲಿಸಿ ಬರುತ್ತಿದ್ದ ಮತ್ತೊಂದು ವಾಹನದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಹನದೊಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆದು ಅಂಬುಲೆನ್ಸ್ ಮೂಲಕ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ದರು. ಸ್ಥಳಕ್ಕೆ ಎಸ್.ಪಿ ಚೇತನ್, ಅಡಿಷನಲ್ ಎಸ್.ಪಿ ಶಿವಕುಮಾರ್ ಸಹ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.