ಮೈಸೂರು : ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾತನಾಡುವ ಬಸವಣ್ಣ ಅಲ್ಲ. ಅವರು ದುಡಿಯುವ ಬಸವಣ್ಣ. ದುಡಿಮೆಯಿಂದ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಸವಣ್ಣ ಸಿಎಂ ಬೊಮ್ಮಾಯಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸಿಎಂ ಬೊಮ್ಮಾಯಿ ಮೌನ ಬಸವಣ್ಣ ಎಂಬ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, ಬೊಮ್ಮಾಯಿಯವರ ದುಡಿಮೆಯ ಫಲವಾಗಿ ಮೈಸೂರಿನ ಏರ್ ಪೋರ್ಟ್ ವಿಸ್ತರಣೆಗೆ ಅನುದಾನ ಕೊಟ್ಟಿದ್ದಾರೆ.
ಕೆಆರ್ ಆಸ್ಪತ್ರೆ ಗೆ ಅನುದಾನ ಕೊಟ್ಟಿದ್ದಾರೆ, ಶಕ್ತಿಧಾಮಕ್ಕೆ ಅನುದಾನ ಕೊಟ್ಟಿದ್ದಾರೆ. ಇಂತಹ ದುಡಿಮೆಯ ಬಸವಣ್ಣನ ಬಗ್ಗೆ ಪ್ರತಿನಿತ್ಯ ಕರ್ಕಶ ಧ್ವನಿಯಲ್ಲಿ ‘ಕಾಕಾ’ ಎನ್ನುವವರಿಗೆ ಅರ್ಥವಾಗುವುದಿಲ್ಲ ಎಂದರು.
ಕೋಡಿಮಠ ಸ್ವಾಮಿಜೀ, ಕುಮಾರಸ್ವಾಮಿ, ಸಿದ್ದರಾಮಯ್ಯರಂತವರ ಹೇಳಿಕೆಗಳಲ್ಲಿ ನಿಖರತೆ, ಸ್ಪಷ್ಟತೆ ಯಾವುದೂ ಇರುವುದಿಲ್ಲ. ಈ ಮೂವರ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಜ್ಯದ ಎಲ್ಲಾ ವಿಚಾರಗಳಲ್ಲೂ ಈ ಮೂವರ ಹೇಳಿಕೆಗಳು ಅಸ್ಪಷ್ಟವಾಗಿಯೇ ಇರುತ್ತವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಹಿಜಾಬ್ ವಿಚಾರ ಬಂದಾಗ ಪ್ರತಿಪಕ್ಷಗಳು ಯಾಕೆ ಆ ಸಮುದಾಯಕ್ಕೆ ಬುದ್ಧಿ ಹೇಳಲಿಲ್ಲ. ಸಮವಸ್ತ್ರ ಎಲ್ಲರಿಗೂ ಕಡ್ಡಾಯ. ಅದನ್ನು ಪಾಲಿಸಿ ಎಂದು ಪ್ರತಿಪಕ್ಷಗಳು ಹೇಳಿದ್ದರೆ ರಾಜ್ಯದಲ್ಲಿ ವಿವಾದಗಳೇ ಸೃಷ್ಟಿಯಾಗುತ್ತಿಲಿಲ್ಲ. ಆವತ್ತು ಅವರಿಗೆ ಇಲ್ಲದ ಕಾನೂನಿನ ಕಥೆ ಹೇಳಿಕೊಟ್ಟು ಗೊಂದಲ ಸೃಷ್ಟಿಗೆ ಕಾರಣದವರು ಇವರು. ಇವತ್ತು ಸರ್ವ ಜನಾಂಗದ ಸಾಮರಸ್ಯದ ಸಭೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿಯವರಿಗೆ ಈ ವಿಚಾರಗಳಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಗೆ ವಿವಾದಗಳನ್ನು ಎಬ್ಬಿಸಿ ಹಿಂದೂಗಳ ದೃಢೀಕರಣ ಮಾಡುವ ಅವಶ್ಯಕತೆ ಇಲ್ಲ. ಹಿಂದೂ, ಮುಸ್ಲಿಂ ಮತ ವಿಭಜನೆ, ಮತ ಕ್ರೋಢೀಕರಣ ಎಲ್ಲಾ ಶುರುವಾಗಿದ್ದು, ವಿಪಕ್ಷಗಳಿಂದ ಹೊರತು ಬಿಜೆಪಿಯಿಂದಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.