ಪಿರಿಯಾಪಟ್ಟಣ: ರೈತರ ಆತ್ಮಹತ್ಯೆ ಪ್ರಕರಣಗಳು ಮತ್ತೆ ಬೆಳಕಿಗೆ ಬರುತ್ತಿದ್ದು, ಇದೀಗ ಸಾಲಬಾಧೆ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಪ್ಪರದಹಳ್ಳಿ ಗ್ರಾಮದ ಸಿ.ಕೆ ಕುಮಾರ್ (45) ಆತ್ಮಹತ್ಯೆ ಮಾಡಿಕೊಂಡಿದ್ದು, ಈತನಿಗೆ 2.32 ಗುಂಟೆ ಜಮೀನಿದ್ದು, ಇದರಲ್ಲಿ ಕೃಷಿ ಮಾಡಿಕೊಂಡಿದ್ದನು. ಈ ನಡುವೆ ಕೃಷಿ ಮಾಡುವ ಸಲುವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆಯಲ್ಲಿ 3 ಲಕ್ಷ ಸಾಲ ಮತ್ತು ಜಮೀನಿನಲ್ಲಿ ಕೊಳವೆಬಾವಿ ಕೊರೆಸಲೆಂದು ಮೈಕ್ರೋ ಫೈನಾನ್ಸ್ ಮತ್ತು ಮಹಿಳಾ ಸ್ವಸಹಾಯ ಸಂಘದಲ್ಲಿ 2 ಲಕ್ಷ ಸಾಲ ಮಾಡಿಕೊಂಡಿದ್ದರು. ಆದರೆ ಎರಡು ಬಾರಿಯೂ ಕೊಳವೆ ಬಾವಿ ವಿಫಲವಾಗಿತ್ತು. ಹೀಗಾಗಿ ಸಾಲದ ಹೊರೆ ತಲೆ ಮೇಲೆ ಬಿದ್ದಿದೆ.
ಇನ್ನೊಂದೆಡೆ ಆ ಸಾಲವನ್ನು ತೀರಿಸಲು ಸ್ನೇಹಿತರ ಬಳಿ 2.50 ಲಕ್ಷ ಸಾಲ ಮಾಡಿ ಕೃಷಿ ಮಾಡಿದ್ದರು. ಆದರೆ ಆ ಬೆಳೆಯೂ ವಿಫಲಗೊಂಡ ಹಿನ್ನೆಲೆಯಲ್ಲಿ ಮನನೊಂದು ಜಮೀನಿನ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ, ವಿಷಯ ತಿಳಿದ ಪತ್ನಿ ರಾಣಿ ಮತ್ತು ಸಂಬಂಧಿಕರು ತಕ್ಷಣ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಾಗ ಕುಮಾರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಮೃತರ ಪತ್ನಿ ರಾಣಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.