ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗದ ಮಹಿಳಾ ಕಲ್ಯಾಣ ಸಂಸ್ಥೆ ವತಿಯಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸಾಧಕರನ್ನು ಸನ್ಮಾನಿಸಲಾಯಿತು.
ಮೈಸೂರಿನ ವಿಭಾಗೀಯ ವ್ಯವಸ್ಥಾಪಕರ ಕಛೇರಿಯ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪೂಜಾ ಅಗರ್ವಾಲ್ ಅವರು, 25 ವರ್ಷಗಳಿಗಿಂತ ಹೆಚ್ಚು ಸೇವೆಯನ್ನು ಪೂರ್ಣಗೊಳಿಸಿದ ಮತ್ತು ತಮ್ಮ ಕರ್ತವ್ಯದ ಅವಧಿಯಲ್ಲಿ ಆದರ್ಶಪ್ರಾಯ ಕೆಲಸ ಮಾಡಿದ ಮೈಸೂರು ವಿಭಾಗದ ವಿವಿಧ ಇಲಾಖೆಗಳ 35 ಪ್ರತಿಭಾನ್ವಿತ ಸಿಬ್ಬಂದಿಗಳನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅವರು, ಸಂಸ್ಥೆಗೆ ಸಿಬ್ಬಂದಿಗಳು ಅತ್ಯಂತ ದೊಡ್ಡ ಆಸ್ತಿ. ಭಾರತೀಯ ರೈಲ್ವೆಯ ಅಭಿವೃದ್ಧಿಗೆ ಅವರು ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಶ್ಲಾಘಿಸಿದರಲ್ಲದೆ, ತಮ್ಮ ಉತ್ತಮ ಕೆಲಸವನ್ನು ಮುಂದುವರೆಸುವಂತೆ ಹೇಳಿದರು.
ಈ ವೇಳೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್, ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕರಾದ ಎ.ದೇವಸಹಾಯಂ, ಬುಡತಿ ಶ್ರೀನಿವಾಸುಲು, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಪ್ರಶಾಂತ್ ಮಾಸ್ತಿಹೊಳಿ, ಮಹಿಳಾ ಕಲ್ಯಾಣ ಸಂಸ್ಥೆಯ ಸದಸ್ಯರು ಹಾಗು ಮೈಸೂರು ವಿಭಾಗದ ಇತರೆ ಹಿರಿಯ ಅಧಿಕಾರಿಗಳು ಸಭಾಂಗಣದಲ್ಲಿ ಉಪಸ್ಥಿತರಿದ್ದರು.