ಮೈಸೂರು: ನಾಗರಿಕರಿಗೆ ಒಂದು ವಾರಗಳ ಬಂದೂಕು ತರಬೇತಿ ಕಾರ್ಯಾಗಾರ ಪಿರಿಯಾಪಟ್ಟಣದ ಪೊಲೀಸ್ ಮೈದಾನದಲ್ಲಿ ಆರಂಭಗೊಂಡಿದ್ದು ಸುಮಾರು ಎಂಬತ್ತಕ್ಕೂ ಹೆಚ್ಚಿನ ಬಂದಿ ಬಂದೂಕು ಬಳಕೆ ಕುರಿತಂತೆ ತರಬೇತಿ ಪಡೆಯುತ್ತಿದ್ದಾರೆ.
ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ಆರಂಭಗೊಂಡಿರುವ ನಾಗರಿಕ ಬಂದೂಕು ತರಬೇತಿ ಕಾರ್ಯಾಗಾರ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ನಡೆಯುತ್ತಿದ್ದು, ತರಬೇತಿಗಾಗಿ ತಾಲ್ಲೂಕಿನ 80 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ತರಬೇತಿ ಪ್ರತಿನಿತ್ಯ ಬೆಳಿಗ್ಗೆ 6.45 ರಿಂದ 8.45 ರವರೆಗೆ ತರಬೇತಿ ನಡೆಯಲಿದೆ.
ಬಂದೂಕು ತರಬೇತಿಯು ಬೈಲುಕುಪ್ಪೆ ವೃತ್ತ ನಿರೀಕ್ಷಕ ಪ್ರಕಾಶ್ ರ ಉಸ್ತುವಾರಿಯಲ್ಲಿ ನಡೆಯುತ್ತಿದ್ದು, ಎಎಸ್ಐ ರಾಜ್ ಕುಮಾರ್ ಹಾಗೂ ಸಿಬ್ಬಂದಿ ತರಬೇತಿಯನ್ನು ನೀಡುತ್ತಿದ್ದಾರೆ. ಈ ತರಬೇತಿಗೆ ನಾಗರಿಕರು ಶ್ವೇತವಸ್ತ್ರ ಧರಿಸಿ ಆಗಮಿಸುತ್ತಿದ್ದು ನೋಡುಗರ ಗಮನಸೆಳೆಯುತ್ತಿದ್ದು, ನಾಗರಿಕರು ಕೂಡ ಹುಮ್ಮಸ್ಸಿನಿಂದ ಭಾಗವಹಿಸುತ್ತಿದ್ದಾರೆ.
ಪೊಲೀಸ್ ಇಲಾಖೆ ಕಳೆದ ಕೆಲವು ವರ್ಷಗಳಿಂದ ಬಂದೂಕು ತರಬೇತಿಯನ್ನು ನೀಡುತ್ತಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ತರಬೇತಿ ನೀಡಲಾಗಿದೆ. ಬಂದೂಕು ಬಳಕೆ ಕುರಿತಂತೆ ಸಮಗ್ರ ಮಾಹಿತಿಯನ್ನು ನೀಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.