ಮೈಸೂರು: ರಾಜ್ಯ ಉಳಿಯಬೇಕಾದರೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು. 2023ಕ್ಕೆ ಖಂಡಿತ ಜೆ.ಡಿ.ಎಸ್. ಪಕ್ಷ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.
ಮೈಸೂರು ನಗರದ ಮಿನಿ ವಿಧಾನಸೌದದಲ್ಲಿ ಮೈಸೂರು, ಚಾಮರಾಜನಗರ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಸಿ.ಎನ್. ಮಂಜೇಗೌಡರ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿ.ಜೆ.ಪಿ. ಗೆದ್ದರೂ ಪರವಾಗಿಲ್ಲ ಜೆ.ಡಿ.ಎಸ್. ಸೋಲಬೇಕು ಎನ್ನುತ್ತಿದ್ದ ಮಾಜಿ ಮುಖ್ಯಮಂತ್ರಿಗಳ ವಿರೋಧದ ನಡುವೆಯೂ ಕುಮಾರಣ್ಣ, ದೇವೇಗೌಡರ ಆಶೀರ್ವಾದದಿಂದ ಕಾರ್ಯಕರ್ತರ ಶ್ರಮದಿಂದ ಸಿ.ಎನ್. ಮಂಜೇಗೌಡರು ಆಯ್ಕೆಯಾಗಿದ್ದಾರೆ. ಮೈಸೂರು ನಗರ ಸೇರಿದಂತೆ ಎರಡೂ ಜಿಲ್ಲೆಗಳ ಮತದಾರರು, ಕಾರ್ಯಕರ್ತರಿಗೆ ತಾಲ್ಲೂಕು ಕೇಂದ್ರಗಳಿಗೆ ತೆರಳಿ ಅಭಿನಂದನೆ ಸಲ್ಲಿಸುತ್ತೇವೆ. ನಮಗೆ ಪಕ್ಷ ಮುಖ್ಯವೇ ಹೊರತು ನಾವು ಮುಖ್ಯವಲ್ಲ ಜಿ.ಟಿ. ದೇವೇಗೌಡರು ಈಗ ಶಾಸಕರಾಗಿದ್ದಾರೆ ಅವರೇನು ಪಕ್ಷ ಬಿಟ್ಟಿಲ್ಲ,
ಮುಂದಿನ ದಿನಗಳಲ್ಲಿ ಅವರ ಬಗ್ಗೆ ಪಕ್ಷ, ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಕಾರ್ಯಕರ್ತರು ಕೇಳಿದಾಗ ಕುಮಾರಸ್ವಾಮಿಯವರು ಚಾಮುಂಡೇಶ್ವರಿಗೆ ನಾನೇ ಬರುತ್ತೇನೆ ಎಂದಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ ಅವರು ರಾಮನಗರದಿಂದಲೇ ಸ್ಪರ್ಧಿಸುತ್ತಾರೆ. ಪದವೀಧರ ಕ್ಷೇತ್ರದಿಂದ ರಾಮುರವರು ಅಭ್ಯರ್ಥಿಯಾಗುತ್ತಾರೆ. ಕಿಲಾರ ಜಯರಾಂ ಮತ್ತು ಮರಿತಿಬ್ಬೇಗೌಡರ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಮೈಸೂರು ನಗರ, ಗ್ರಾಮಾಂತರ ಜನರಿಗೆ ಅನುಕೂಲವಾಗಲೆಂದು ಕಛೇರಿ ತೆರೆದಿದ್ದೇನೆ. ಸಾ.ರಾ. ಮಹೇಶ್ರವರಿಂದ ನಾನು ಪ್ರೇರೇಪಣೆಗೊಂಡು ಚಾಮುಂಡೇಶ್ವರಿ ಕ್ಷೇತ್ರದ ಎಲ್ಲಾ ಅಂಗವಿಕಲರಿಗೆ ಉಚಿತ ಬಸ್ಪಾಸ್ ಮಾಡಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಹಾಗೆಯೇ ಪೊಲೀಸರ ದಕ್ಷತೆ ಹೆಚ್ಚಿಸಲು ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮಾದರಿಯಲ್ಲಿ ಪಿ ಕ್ಯಾಪ್ ವಿತರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಗೃಹಮಂತ್ರಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೂ ಮನವಿ ಸಲ್ಲಿಸಿದ್ದೇವೆ. ಇದರ ಬಗ್ಗೆ ಸದನದಲ್ಲಿಯೂ ಸಹ ಚರ್ಚಿಸುವುದಾಗಿ ತಿಳಿಸಿದರು. ಕಛೇರಿಯಲ್ಲಿ ಶನಿವಾರ ಮತ್ತು ಸೋಮವಾರ ಮಧ್ಯಾಹ್ನದವರೆಗೆ ಸಾರ್ವಜನಿಕರಿಗೆ ಸಿಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಶ್ವಿನ್ಕುಮಾರ್, ಜೆ.ಡಿ.ಎಸ್. ಜಿಲ್ಲಾ ಅಧ್ಯಕ್ಷ ನರಸಿಂಹಸ್ವಾಮಿ, ಜಿ.ಪಂ. ಮಾಜಿ ಸದಸ್ಯರಾದ ಸಿ.ಜೆ. ದ್ವಾರಕೀಶ್, ಬೀರಹುಂಡಿ ಬಸವಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಎಸ್. ಸಿದ್ದೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಬೆಳವಾಡಿ ಶಿವಮೂರ್ತಿ, ನಗರಪಾಲಿಕೆ ಸದಸ್ಯರಾದ ಶೋಭಾ, ಅಶ್ವಿನಿ ಅನಂತು, ಪ್ರೇಮಾಶಂಕರೇಗೌಡ, ಶ್ರೀಧರ್, ಎಸ್.ಬಿ.ಎಂ ಮಂಜುನಾಥ್, ಮುಖಂಡರಾದ ರಾಮು, ಭರತ್ಮಂಜೇಗೌಡ, ಅಬ್ದುಲ್ಲಾ , ಚಲುವೇಗೌಡ, ಕೆಂಪನಾಯಕ, ರಮ್ಮನಹಳ್ಳಿ ನಾಗರಾಜು, ಅಮ್ಮ ಸಂತೋಷ್, ರಮೇಶ್, ಟ್ಯೂಬ್ ಮಹದೇವ್, ಮೂರ್ತಿ, ಬಸವರಾಜು, ಪಿತಾಂಭರ ಹಾಜರಿದ್ದರು.