ಮೈಸೂರು: ಜೂ.21ರಂದು ಅರಮನೆ ಅಂಗಳದಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಸುಮಾರು 75 ಸಾವಿರ ಮಂದಿಯನ್ನು ಸೇರಿಸುವ ಗುರಿ ಹೊಂದಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದ ಹೆಗ್ಗುರುತಾದ ಅರಮನೆಯ ಮುಂದೆ ಯೋಗ ಪ್ರದರ್ಶನ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈವರೆಗಿನ ಯೋಗ ಪ್ರದರ್ಶನಗಳಲ್ಲಿ ಆಯಾ ನಗರದ ಹೆಗ್ಗುರುತಿನ ಬಳಿಯೇ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತೆಯೇ ಈ ಬಾರಿ ಅರಮನೆ ಆವರಣದಲ್ಲಿ ಯೋಗ ಪ್ರದರ್ಶಿಸುವುದು ಸೂಕ್ತ ಎಂದರು.
ಅರಮನೆ ಆವರಣದಲ್ಲಿ ಅಷ್ಟು ಪ್ರಮಾಣದ ಜನರನ್ನು ಸೇರಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಎಲ್ಇಡಿ ಪರದೆಯ ಮೂಲಕ ನೇರ ಪ್ರಸಾರ ಆಯೋಜಿಸಿ ಬೇರೆ ಕಡೆಯಲ್ಲಿ ಯೋಗ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಸುಮಾರು 3ತಿಂಗಳಿಂದಲೂ ಇದಕ್ಕೆ ಪೂರ್ವ ತಯಾರಿ ನಡೆದಿದೆ. ಪ್ರಧಾನಿಗಳು ಮೈಸೂರಿಗೆ ಅನೇಕ ಕೊಡುಗೆ ನೀಡಿದ್ದಾರೆ. ಮೈಸೂರು-ಬೆಂಗಳೂರು ಹೆದ್ದಾರಿ ವಿಸ್ತರಣೆ, ವಾಕ್ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ಅನುದಾನ, ಹೆಚ್ಚುವರಿ ರೈಲು, ರೈಲು ನಿಲ್ದಾಣಗಳ ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ಅನೇಕ ಯೋಜನೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿಗಳು ಇಲ್ಲಿಗೆ ಬಂದಾಗ ಏನಾದರೊಂದು ಯೋಜನೆ ಘೋಷಣೆ ಮಾಡುತ್ತಾರೆ ಎಂಬುದಕ್ಕಿಂತಲೂ ಡಂಗೂರ ಬಾರಿಸಿಕೊಂಡು ಓಡಾಡುವವರು ನಾವಲ್ಲ. ಏನೇ ಮಾಡಿದರು ಕೆಲಸ ಮಾಡಿ ತೋರಿಸುತ್ತೇವೆ. ವಾಕ್ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ನೀಡಿ ಅತ್ಯುನ್ನತ ಕೇಂದ್ರವಾಗಿ ಪರಿವರ್ತಿಸುವ ಯೋಜನೆ ಎಲ್ಲಿಯೂ ಹೇಳಿರಲಿಲ್ಲ. ಈಗ ಮಾಡಿಲ್ಲವೇ? ಎಂದು ಹೇಳಿದರು.