ಎಚ್.ಡಿ.ಕೋಟೆ: ಯಾವುದೇ ಧರ್ಮವಾದರು ಕೆಟ್ಟದನ್ನು ಬಯಸದೆ ಪ್ರತಿಯೊಂದು ಧರ್ಮವು ಉತ್ತಮವಾದ ಜೀವನ ಸಾಗಿಸಬೇಕು ಎಂಬ ಸಂದೇಶವನ್ನು ನೀಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅಭಿಪ್ರಾಯ ವ್ಯಕ್ತ ಪಡಿಸಿದರು.
ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ದೊಡ್ಡಮ್ಮತಾಯಿಯ ನೂತನ ದೇವಸ್ಥಾನದ ಉದ್ಘಾಟನೆಯನ್ನು ನೆರವೇರಿಸಿ ಬಳಿಕ ಮಾತನಾಡಿದ ಅವರು, ನಮ್ಮ ದೇಶದಲ್ಲಿ ದೈವ ಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇದೆ, ಬಹುಶಃ ನಮ್ಮ ದೇಶದಲ್ಲಿರುವಷ್ಟು ದೇವಾಲಯಗಳು ಬೇರೆ ಯಾವ ದೇಶದಲ್ಲಿಯೂ ಇಲ್ಲ ಎನಿಸುತ್ತದೆ. ನಮ್ಮಲ್ಲಿ ಒಂದೇ ಗ್ರಾಮದಲ್ಲಿ ಅನೇಕ ದೇವಾಲಯಗಳನ್ನು ಕಾಣಬಹುದಾಗಿದೆ. ಆದ್ದರಿಂದ ನಾನು ತಮ್ಮಲ್ಲಿ ಮನವಿ ಮಾಡುವುದೇನೆಂದರೆ ದೇವಾಲಯ ನಿರ್ಮಾಣ ಮಾಡಲು ಪೈಪೋಟಿ ಬೇಡ ಗ್ರಾಮಕ್ಕೆ ಒಂದು ದೇವಾಲಯ ಇದ್ದರೆ ಸಾಕು ಎಂದರು.
ಇತ್ತೀಚೆಗೆ ನಮ್ಮಲ್ಲಿ ಮೌಢ್ಯತೆ ಹೆಚ್ಚಾಗುತ್ತಿದೆ. ಕಷ್ಟುಪಟ್ಟು ದುಡಿದ ಹಣದ ಬಹುಪಾಲನ್ನು ನಾವು ಹರಿಕೆ, ಹೋಮ ಎಂದು ವ್ಯಯ ಮಾಡುತ್ತಿದ್ದೇವೆ. ನಾವು ನಮ್ಮ ಜೀವನದಲ್ಲಿ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತನ್ನು ಹಾಗೂ ವೈಜ್ಞಾನಿಕ ತಳಹದಿಯಲ್ಲಿ ಜೀವನ ಸಾಗಿಸಲು ಕಲಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ರವರ ಆದರ್ಶಗಳನ್ನು ಪಾಲಿಸಿ ಜೀವನ ಮಾಡಬೇಕಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸರಳವಾದ ಜೀವನವನ್ನು ಸಾಗಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸೀಪುರ ಪಿ ರವಿ, ಭಾಗ್ಯಲಕ್ಷ್ಮಿ ನಿಂಗರಾಜು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಮೈಮುಲ್ ನಿರ್ದೇಶಕ ಈರೇಗೌಡ ಮುಂತಾದವರು ಇದ್ದರು.