ನಂಜನಗೂಡು: ಮಾರ್ಚ್ 28ರಿಂದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಆರಂಭವಾಗುತ್ತಿದ್ದು ಈ ಸಂಬಂಧ ಪರೀಕ್ಷೆಯನ್ನು ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ನಡೆಸಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ.
ಈ ಸಂಬಂಧ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು, ನಗರದ ತಾಲೂಕು ಕಚೇರಿ ಸಂಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆಯ ಸಿದ್ದತೆ ಸಭೆಯನ್ನು ನಡೆಸಿ ಅಧಿಕಾರಿಗಳಿಗೆ ನಿದರ್ಶನ ನೀಡಿದ್ದಾರೆ.
ಪರೀಕ್ಷೆಗೆ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಅವರು, ಆರೋಗ್ಯ ಇಲಾಖೆ ಹೋಬಳಿಗೆ ಒಂದರಂತೆ ತುರ್ತು ಚಿಕಿತ್ಸಾ ವಾಹನ ಸಿದ್ದಪಡಿಸಿಕೊಳ್ಳಬೇಕು, ರೋಗ ಗುಣಲಕ್ಷಣಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ತೆರೆಯಬೇಕು, ತಾಲೂಕು ಪಂಚಾಯ್ತಿ ವತಿಯಿಂದ ಗ್ರಾಮೀಣ ಭಾಗದಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಸ್ ಮಾಡಬೇಕು, ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ನಿಯೋಜನೆಗೊಳಿಸಿ ಭದ್ರತೆ ಒದಗಿಸಬೇಕು ಎಂಬುದು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಕಲ ಸಿದ್ದತೆ ಕೈಗೊಂಡು ಪರೀಕ್ಷೆ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಾತನಾಡಿ ಮಾ 28 ರಿಂದ ಪರೀಕ್ಷೆ ಪ್ರಾರಂಭವಾಗಲಿದ್ದು, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 15, ನಗರ ಪ್ರದೇಶದಲ್ಲಿ 3 ಕೇಂದ್ರಗಳು ಸೇರಿದಂತೆ 18 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 2356 ಬಾಲಕರು, 2301 ಬಾಲಕಿಯರು ಸೇರಿದಂತೆ ಒಟ್ಟು 4663 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಆಶಾಕಾರ್ಯಕರ್ತೆಯರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯಾಧಿಕಾರಿ ಈಶ್ವರ್ ಕಾನಟ್ಕೆ, ಸಿಡಿಪಿಓ ಮಂಜುಳಾ, ಸಿಪಿಐ ಲಕ್ಷ್ಮಿಕಾಂತ ತಳವಾರ್ ಸೇರಿದಂತೆ ಹಲವರು ಇದ್ದರು.