ಮೈಸೂರು: ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್ (ಕವಲಂದೆ ಚಿಕ್ಕ ಪಾಕಿಸ್ತಾನ) ಎನ್ನುವ ಹಿನ್ನೆಲೆ ಧ್ವನಿ ಇರುವ ವಿಡಿಯೊವೊಂದು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈದ್ ಉಲ್ ಫಿತ್ರ್ ಹಬ್ಬದಂದು ನಂಜನಗೂಡು ತಾಲೂಕಿನ ಕವಲಂದೆಯಲ್ಲಿ ಪ್ರಾರ್ಥನೆ ಸಲ್ಲಿಸಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ಹೊರಟಿರುವ ದೃಶ್ಯಕ್ಕೆ ವ್ಯಕ್ತಿಯೊಬ್ಬ ಹಿನ್ನೆಲೆಯಲ್ಲಿ ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್ ಎಂದು ಹೇಳುತ್ತಾನೆ. ೩೦ ಸೆಕೆಂಡ್ಗಳ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಈದ್ ಉಲ್ ಫಿತ್ರ್ ದಿನ ಮೆರವಣಿಗೆಯಲ್ಲಿ ಹೊರಟ ಮುಸ್ಲಿಮರು ಈ ಘೋಷಣೆ ಕೂಗಿಲ್ಲ. ಠಾಣೆಯ ಮುಂಭಾಗ ಇರುವ ದರ್ಗಾದ ಸಮೀಪ ಪ್ರಾರ್ಥನೆ ಮಾಡಿ ಅವರೇ ಮನೆಗೆ ಹೊರಡಿ ಎಂದು ಎಲ್ಲರನ್ನೂ ಕಳುಹಿಸುತ್ತಾರೆ. ಆದರೆ, ವ್ಯಕ್ತಿಯೊಬ್ಬ ವಿಡಿಯೊಗೆ ಈ ರೀತಿ ಧ್ವನಿ ನೀಡಿದ್ದಾನೆ. ಈ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಕವಲಂದೆ ಪೊಲೀಸರು ತಿಳಿಸಿದರು.
ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಪಾಕ್ ಪರವಾಗಿ ಘೋಷಣೆಗಳನ್ನು ಕೂಗಿರುವವರು ದೇಶದ್ರೋಹಿಗಳು. ಆ ದೇಶದ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಲಿ. ಸರ್ಕಾರ ಇಂಥ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕವಲಂದೆ ಚಲೋ ಚಳವಳಿ ನಡೆಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು. ನೀಚರು, ನಿರ್ಲಜ್ಜರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರು, ಕವಲಂದೆಯಲ್ಲಿ ರಂಜಾನ್ಹಬ್ಬದಂದು ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್ ಎಂದು ಕೂಗುವ ವಿಡಿಯೊ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ನಂಜನಗೂಡು ತಾಲ್ಲೂಕಿನ ಕೌಲಂದೆಯಲ್ಲಿ ರಂಜಾನ್ ಹಬ್ಬದಲ್ಲಿ ಪ್ರಾರ್ಥನೆ ಮಾಡಲು ತೆರಳುವ ವೇಳೆ ಕವಲಂದೆ ಛೋಟಾ ಪಾಕಿಸ್ತಾನ್ ಎಂದು ವಿಡಿಯೋದಲ್ಲಿ ಕೂಗಿರುವುದು ವೈರಲ್ ಆಗಿದ್ದು, ಇದನ್ನು ಖಂಡಿಸಿ ಗುರುವಾರ ಸಂಜೆ ಹುಲ್ಲಹಳ್ಳಿ ವೃತ್ತದ ಬಳಿ ಯುವ ಬ್ರಿಗೇಡ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ದೇಶದ್ರೋಹಿಗಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸಿದ್ದು, ಈ ವೇಳೆ ರಾಜ್ಯ ಖಾದಿ ಬೋರ್ಡ್ ಅಧ್ಯಕ್ಷ ಕೃಷ್ಣಪ್ಪ ಗೌಡ ಮಾತನಾಡಿ ನಮ್ಮ ದೇಶ ಶಾಂತಿಯುತವಾಗಿದೆ. ನಾವು ಶಾಂತಿಪ್ರಿಯರು ನಮ್ಮ ದೇಶದಲ್ಲಿ ನೂರು ಕೋಟಿ ಜನಸಂಖ್ಯೆ ಇದ್ದೇವೆ. ನೀವು ಹುಟ್ಟಿ ಬೆಳೆದಿರುವುದು ಇಲ್ಲೇ ಎಂಬುದನ್ನು ಅರಿಯಿರಿ ಎಂದರು.
ಯುವ ಬ್ರಿಗೇಡ್ ದಕ್ಷಿಣ ವಲಯ ಸಂಚಾಲಕ ಚಂದ್ರು ಮಾತನಾಡಿ ಪ್ರಾರ್ಥನೆ ಮಾಡುವುದರ ಬದಲಾಗಿ ನೀವು ಹೋರಾಟ ಮಾಡಲು ಸಿದ್ಧರಿರುವುದರ ಸುಳಿವು ಇಂತಹ ಘೋಷಣೆಯಿಂದ ತಿಳಿಯುತ್ತಿದೆ. ನಮ್ಮ ದೇಶ ಶಾಂತಿ, ಸೌಹಾರ್ದತೆ ಬಯಸುವ ದೇಶ. ಪ್ರಾರ್ಥನೆ ವೇಳೆಯಲ್ಲಿ ಮಿನಿ ಪಾಕಿಸ್ತಾನ ಎಂದು ಹೇಳುತ್ತಿದ್ದೀರಿ. ಮೊದಲು ಪೊಲೀಸರು ಇದರ ಬಗ್ಗೆ ತನಿಖೆ ಮಾಡಬೇಕು. ಅವರು ಕ್ಷಮೆ ಕೇಳಬೇಕು. ಘೋಷಣೆ ಕೂಗಿದವರನ್ನು ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಕೌಲಂದೆ ಛಲೋ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ರಾಷ್ಟ್ರೀಯ ಹೆದ್ದಾರಿ ವಿಶ್ವೇಶ್ವರಯ್ಯ ವೃತ್ತದಲ್ಲಿ ಹತ್ತು ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.