ಮೈಸೂರು: ನಗರದ ಚಾಮುಂಡಿಬೆಟ್ಟದ ಪಾದದ ರಸ್ತೆಯಲ್ಲಿರುವ ಸಾರ್ವಜನಿಕ ಹೂಳುವ ಸ್ಮಶಾನಕ್ಕೆ ಮ್ಯಾನ್ ಹೋಲ್ ಸಮಸ್ಯೆಯಾಗಿ ಪರಿಣಮಿಸಿದೆ. ಸ್ಮಶಾನದ ದ್ವಾರದಲ್ಲಿಯೇ ಇರುವ ಮ್ಯಾನ್ ಹೋಲ್ ಆಗಾಗ್ಗೆ ಬಂದ್ ಆಗಿ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುವುದರಿಂದ ಇಡೀ ವಾತಾವರಣ ಕಲುಷಿತಗೊಂಡು ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗೆನೋಡಿದರೆ ಹೂಳುವ ಸ್ಮಶಾನ ಮೇಲ್ನೋಟಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಎದ್ದು ಕಾಣುತ್ತಿದೆ. ಪ್ರವೇಶ ದ್ವಾರದ ಗೇಟ್ ಮುರಿದು ಹಲವು ವರ್ಷ ಕಳೆದರೂ ಅದನ್ನು ದುರಸ್ತಿ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ. ಜತೆಗೆ ಸ್ಮಶಾನ ಕುರುಚಲು ಕಾಡಿನಿಂದ ಕೂಡಿದ್ದು, ಸ್ವಚ್ಛಗೊಳಿಸುವ ಕಾರ್ಯ ನಡೆದಿಲ್ಲ.
ಕೆಲವರು ಆರೋಪಿಸುವಂತೆ ರಾತ್ರಿಯಾದಂತೆ ಗಾಂಜಾ ವ್ಯಸನಿಗಳ ತಾಣವಾಗುತ್ತದೆ. ಪೊಲೀಸರು ಗಸ್ತು ತಿರುಗಿದರೂ ಅವರ ಕಣ್ಣು ತಪ್ಪಿಸಿ ಕೆಲವರು ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಾಗಾಗಿ ಇತ್ತ ನಿಗಾವಹಿಸಬೇಕೆಂಬ ಮನವಿಯನ್ನು ಮಾಡುತ್ತಿದ್ದಾರೆ.
ಇನ್ನು ಸ್ಮಶಾನದ ಪ್ರವೇಶದ್ವಾರದಲ್ಲೊಂದು ಕಲ್ಯಾಣಿಯಿದ್ದು, ಈ ಹಿಂದೆ ಇದು ಗಿಡಗಂಟಿಗಳಿಂದ ಕೂಡಿ ನಿರ್ಲಕ್ಷ್ಯಕ್ಕೊಳಗಾಗಿತ್ತು. ಸುಮಾರು ಮೂವತ್ತು ವರ್ಷಗಳ ಹಿಂದೆ ಕಲ್ಯಾಣಿ ನಡುವೆ ಗೋಪುರ ನಿರ್ಮಿಸಿ ಅದರಲ್ಲೊಂದು ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕೆಲವು ವರ್ಷಗಳ ಕಾಲ ಇಲ್ಲೊಂದು ಪುಟ್ಟ ಉದ್ಯಾನ ನಿರ್ಮಿಸಿ ಸ್ಮಶಾನಕ್ಕೊಂದು ಮೆರಗು ನೀಡಲಾಗಿತ್ತು. ಕಲ್ಯಾಣಿ ತುಂಬಾ ನೀರು ತುಂಬಿಸಲಾಗುತ್ತಿತ್ತಲ್ಲದೆ, ಸುಂದರವಾಗಿಯೇ ಕಾಣಿಸುತ್ತಿತ್ತು.
ನಂತರದ ವರ್ಷಗಳಲ್ಲಿ ಇದು ನಿರ್ಲಕ್ಷ್ಯಕ್ಕೆ ಒಳಗಾಯಿತು. ಕಲ್ಯಾಣಿಗೆ ನೀರು ಹರಿಯುವುದು ನಿಂತು ಹೋಯಿತು. ಪರಿಣಾಮ ಗಿಡಗಂಟಿಗಳಿಂದ ಕೂಡಿತ್ತು. ಇತ್ತೀಚೆಗೆ ಯುವ ಬ್ರಿಗೇಡ್ ಕಲ್ಯಾಣಿಯನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿತ್ತು. ಈ ವೇಳೆ ಕಲ್ಯಾಣಿಯಲ್ಲಿ ತುಂಬಿದ್ದ ಹೂಳನ್ನು ತೆಗೆಯಲಾಯಿತು. ಜತೆಗೆ ಹಿಂದೆ ಗೋಪುರ ನಿರ್ಮಿಸುವಾಗ ಕಾಂಕ್ರಿಟ್ ಹಾಕಿದ್ದರಿಂದ ನೀರಿನ ಜಲ ಮೂಲ ಮುಚ್ಚಿಹೋಗಿತ್ತು. ಹೀಗಾಗಿ ಇನ್ನಷ್ಟು ಆಳ ತೆಗೆಯುವ ವೇಳೆ ಗೋಪುರ ಕುಸಿದು ಬಿದ್ದಿತ್ತು.
ತದ ನಂತರ ಗೋಪುರವನ್ನು ತೆರವುಗೊಳಿಸಿ ಕಲ್ಯಾಣಿಯ ದಂಡೆಯಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಲು ವ್ಯವಸ್ಥೆ ಮಾಡಲಾಯಿತು. ಸದ್ಯ ಕಲ್ಯಾಣಿಯನ್ನು ದುರಸ್ತಿಗೊಳಿಸಿರುವುದರಿಂದ ಜಲಮೂಲ ಚೇತರಿಕೆ ಕಂಡಿದ್ದು ಕಲ್ಯಾಣಿಯಲ್ಲೀಗ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಕಲ್ಯಾಣಿಯಲ್ಲಿ ನೀರು ಹೆಚ್ಚಾದರೆ ಸ್ಮಶಾನಕ್ಕೆ ಶವಗಳ ಅಂತ್ಯಕ್ರಿಯೆಗೆ ಬರುವರಿಗೆ ಅನುಕೂಲವಾಗಲಿದೆ. ಯುವ ಬ್ರಿಗೇಡ್ ಕಾಳಜಿ ವಹಿಸಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಕಲ್ಯಾಣಿಯನ್ನು ದುರಸ್ತಿ ಮಾಡಿದ್ದರೂ ಇದರ ಮುಂದೆ ಹಾದು ಹೋಗಿರುವ ಒಳಚರಂಡಿಯ ಮ್ಯಾನ್ ಹೋಲ್ ಬಂದ್ ಆಗಿ ಕೊಳಚೆ ನೀರು ಹೊರಗೆ ಬಂದು ಎರಡು ಭಾಗವಾಗಿ ಹರಿಯುತ್ತಿದ್ದು, ಒಂದು ಭಾಗ ರಸ್ತೆಯಲ್ಲಿ ಹರಿದರೆ ಮತ್ತೊಂದು ಭಾಗದಲ್ಲಿ ಹರಿಯುವ ಹರಿಯುವ ಕೊಳಚೆ ಕಲ್ಯಾಣಿಗೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಮ್ಯಾನ್ ಹೋಲ್ ನಿಂದ ಹೊರ ಬರುವ ತ್ಯಾಜ್ಯ ನೀರು ಕಲ್ಯಾಣಿಗೆ ಸೇರುವುದನ್ನು ತಪ್ಪಿಸುವುದಲ್ಲದೆ, ಸ್ಮಶಾನದ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ.