ಮಂಡ್ಯ: ಬದುಕಿನಲ್ಲಿ ವೈಜ್ಞಾನಿಕ ಮನೋಧರ್ಮವೇ ಮುಖ್ಯವಾಗಬೇಕು ಎಂದು ಚಿತ್ರನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಥಮ ಯುವ ವೈಜ್ಞಾನಿಕ ಸಂಸತ್ ಅಧಿವೇಶನ-2022 ಕಾರ್ಯಕ್ರಮದಲ್ಲಿ ‘ಯುವ ಜನತೆ ಮತ್ತು ಚಲನಚಿತ್ರ’ ಕುರಿತ ಉಪನ್ಯಾಸದಲ್ಲಿ ಮಾತನಾಡಿ, ವಿಜ್ಞಾನ ಎಂದರೆ ಕೇವಲ ಜ್ಞಾನವಲ್ಲ. ವಿಜ್ಞಾನ ಎಂಬುದು ಪ್ರತಿಯೊಂದನ್ನು ಪರೀಕ್ಷಿಸಿ, ಪರಿಶೀಲಿಸಿ, ಸಾಕ್ಷೀಭೂತವಾಗಿ ಹೇಳುತ್ತದೆ. ವಿಜ್ಞಾನದ ಕೌತುಕ ಹಾಗೂ ಸಂಶೋಧನೆಗಳೇ ರೋಮಾಂಚಕವಾದುದು ಹಾಗಾಗಿ ವಿಜ್ಞಾನಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಪಾಶ್ಚಾತ್ಯರ ವೈಜ್ಞಾನಿಕ ಆವಿಷ್ಕಾರದಿಂದ ಹುಟ್ಟಿಕೊಂಡ ಚಲನಚಿತ್ರ ವಿಶ್ವವ್ಯಾಪಿಯಾಯಿತು.ಧಾದಾಫಾಲ್ಕೆ ಮೊದಲಿಗೆ ಮುಂಬೈಯಲ್ಲಿ ಪ್ರಾರಂಭವಾಯಿತು. ಚಲನಚಿತ್ರ ಬಹಳ ಪ್ರಭಾವಶಾಲಿ ಮಾಧ್ಯಮ, ಬರವಣಿಗೆಯಷ್ಟು ಸರಳವಾಗಬೇಕು. ವಾಣಿಜ್ಯದ ಸರಕಾಗಿರುವುದರಿಂದ ಎಷ್ಟರಮಟ್ಟಿಗೆ ಅದು ವಿಜ್ಞಾನವಾಗಬಲ್ಲುದು ಎಂಬುದು ಚರ್ಚಾಸ್ಪದ. ಅದರಲ್ಲಿ ರಂಜನೆಗೆ ಒತ್ತು ಕೊಡುತ್ತಿದ್ದೇವೆ. ಚಿಂತನೆಯ ಭಾಗಕ್ಕೆ ಹೆಚ್ಚು ಒತ್ತು ಕೊಡುವುದಿಲ್ಲ. ಚಿಂತನೆಯ ಮೂಲಕ ಹೊಸ ಸಮಾಜವನ್ನು ಕಟ್ಟಿಕೊಳ್ಳಲು ಬಳಸಿಕೊಳ್ಳಬೇಕು. ಚಲನಚಿತ್ರ ಒಂದು ರೀತಿ ಚಲಿಸುವ ಬರವಣಿಗೆ ಅದರಲ್ಲಿ ಪದ್ಯ ಇದ್ದರೆ, ಅದು ದೃಶ್ಯ ಕಾವ್ಯವೂ ಆಗಬಲ್ಲದು.ಲೂಯಿ ಪ್ಯಾಶ್ಚರ್, ಮೇಡಂ ಕ್ಯೂರಿ ಔಷಧಗಳನ್ನು ಕಂಡು ಹಿಡಿಯದಿದ್ದರೆ ಮನುಷ್ಯರು ಹುಳುಗಳ ರೀತಿಯಲ್ಲಿ ಸಾಯಬೇಕಾಗಿತ್ತು. ಜೀವ ಉಳಿಸುವುದು ಒಂದು ಮುಖವಾದರೆ ವಿನಾಶದ ಇನ್ನೊಂದು ಮುಖವೂ ಇದೆ ಎಂದರು.
ಎಲ್ಲಾ ಕ್ಷೇತ್ರಗಳಲ್ಲೂ ವೈಜ್ಞಾನಿಕ ಚಿಂತನೆಗಳು ಬೆಳೆಯುತ್ತಿರುವುದರಿಂದ ಹೊಸ ಹೊಸ ಆವಿಷ್ಕಾರಗಳು ಮೂಡಿಬರುತ್ತಿವೆ. ಯುವಕರು ಹೆಚ್ಚು ಹೆಚ್ಚು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವಂತಾಗಬೇಕು. ಸಂಶೋಧನೆಯತ್ತ ಹೆಚ್ಚು ಗಮನ ಹರಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್, ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಯಮದೂರು ಸಿದ್ದರಾಜು, ಪರಿಷತ್ತಿನ ಪ್ರಮುಖರಾದ ಪ್ರಭಾವತಿ ಎಸ್.ಡಿ, ಸುನಂದಾ ಜಯರಾಂ, ಚಿಕ್ಕಹನುಮಂತೇಗೌಡ, ವಿ.ಟಿ.ಸ್ವಾಮಿ, ಮಂಡ್ಯ ಜಿಲ್ಲಾ ಅಧ್ಯಕ್ಷ ಶಿವಲಿಂಗಯ್ಯ, ಜಿ.ಎನ್.ಕೆಂಪರಾಜು, ಅಂಬರಹಳ್ಳಿ ಸ್ವಾಮಿ ವಿನಯಕುಮಾರ್ ಮತ್ತಿತರರು ಭಾಗವಹಿಸಿದ್ದರು.