ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಬಡಾವಣೆಗಳಲ್ಲಿ ಕುಡಿಯುವ ನೀರು ಸಮಸ್ಯೆ ಶಾಶ್ವತ ಇತ್ಯರ್ಥಕ್ಕೆ 2022-23ನೇ ಸಾಲಿನ ಆಯವ್ಯಯದಲ್ಲಿ 185ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವರ್ಷದ ಮುಡಾ ಆಯವ್ಯಯದ ಪ್ರಮುಖ ನಿರ್ಣಯಗಳನ್ನು ಮಂಡಿಸಿದ ಅವರು, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಬಜೆಟ್ ಮೀಸಲಿಟ್ಟಿರುವುದು ಇದೇ ಮೊದಲು. ಹಾಗೆಯೇ ಮೈಸೂರು ನಗರ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ವಿವರಿಸಿದರು.
180 ಎಂಎಲ್ಡಿ ಸಾಮರ್ಥ್ಯದ ಬಿದರಗೂಡು ಯೋಜನೆಯಲ್ಲಿ ಈವರೆಗೂ 60 ಎಂಎಲ್ಡಿ ಸಾಮರ್ಥ್ಯಕ್ಕೆ ಮಾತ್ರ ಸೀಮಿತಗೊಳಿಸಿದೆ. ಉಳಿದ 120 ಎಂಎಲ್ಡಿ ಸಾಮರ್ಥ್ಯ ಹೆಚ್ಚಿಸಲು 150 ಕೋಟಿ ರೂ. ಅನುದಾನ ನೀಡಲಾಗಿದೆ. ಹಾಗೆಯೇ ಹಳೆ ಉಂಡವಾಡಿ ಯೋಜನೆಗೆ ಸರ್ಕಾರದ ಪೂರ್ವಾನುಮತಿ ಪಡೆದು 25ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕಾಯ್ದಿರಿಸಲಾಗಿದೆ ಎಂದರು.
ಹಳೇ ಉಂಡವಾಡಿ ಮತ್ತು ಬಿದರಗೂಡು ಕುಡಿಯುವ ನೀರು ಮೇಲ್ಪಂಕ್ತೀಕರಣ ಯೋಜನೆಯಿಂದ ಸ್ವೀಕೃತವಾಗುವ ಕುಡಿಯುವ ನೀರನ್ನು ಪ್ರಾಧಿಕಾರದ ಬಡಾವಣೆಗಳಲ್ಲಿ ಹಂಚಿಕೆ ಮಾಡುವ ಮತ್ತು ವಿತರಣಾ ವ್ಯವಸ್ಥೆ ಕಲ್ಪಿಸುವ ದೃಷ್ಠಿಯಿಂದ 6 ವಿವಿಧ ಸ್ಥಳಗಳಲ್ಲಿ ಎಂಬಿಆರ್ ಗಳನ್ನು 1000 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಕೆರೆಗಳ ಪೈಕಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 8ಕೆರೆಗಳನ್ನು 9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಿ, ಕೆರೆ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಒತ್ತು ನೀಡಲು ಉದ್ದೇಶಿಸಲಾಗಿದೆ. 7 ಬಡಾವಣೆಗಳ ವ್ಯಾಪ್ತಿಯಲ್ಲಿ 11.25 ಕೋಟಿ ರೂ. ವೆಚ್ಚದಲ್ಲಿ 7 ವಿವಿಧ ರಾಜಕಾಲುವೆ ಅಭಿವೃದ್ದಿಗೆ ಮತ್ತು ದುರಸ್ತಿ ಕಾರ್ಯಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಾಧಿಕಾರದಿಂದ ಈವರೆಗೂ ವಿವಿಧ ಕಾರಣಗಳಿಂದ ಹಂಚಿಕೆಯಾದ ಮೂಲ ನಿವೇಶನಕ್ಕೆ ಬದಲಾಗಿ ಬದಲಿ ನಿವೇಶನ ನೀಡಲಾಗಿದ್ದರೂ, ಹಂಚಿಕೆಯಾಗಿದ್ದ ಮೂಲ ನಿವೇಶನಗಳು ಹಂಚಿಕೆದಾರರ ಹೆಸರಿನಲ್ಲಿ ಮುಂದುವರೆದು ಪ್ರಾಧಿಕಾರದ ಆಸ್ತಿ ಅನ್ಯರ ವಶವಾಗಿರುವ ಬಗ್ಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬದಲಿ ನಿವೇಶನ ನೀಡಲಾದ ಎಲ್ಲಾ ಪ್ರಕರಣಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ, ಮೂಲ ನಿವೇಶನ ರದ್ಧತಿಯಾಗಿ ಪ್ರಾಧಿಕಾರದ ವಶದಲ್ಲಿರುವ ಬಗ್ಗೆ ಮತ್ತು ಭೌತಿಕವಾಗಿ ಲಭ್ಯತೆ ಬಗ್ಗೆ ವರದಿ ತಯಾರಿಸಿದಲ್ಲಿ ಪ್ರಾಧಿಕಾರಕ್ಕೆ ನೂರಾರು ಕೋಟಿ ಬೆಲೆ ಬಾಳುವ ಆಸ್ತಿ ಸಂರಕ್ಷಣೆಯಾದಂತಾಗುತ್ತದೆ. ಹೀಗಾಗಿ ಸದರಿ ಉದ್ದೇಶಕ್ಕೆ ವಿಶೇಷ ತಂಡ ರಚಿಸಲು ಅಗತ್ಯವಿದ್ದು, ಈ ಉದ್ದೇಶಕ್ಕಾಗಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇಬ್ಬರು ನಿವೃತ್ತ ತಹಸೀಲ್ದಾರ್ ಹಂತದ ಅಧಿಕಾರಿಗಳು ನೇಮಕ ಮಾಡಿಕೊಂಡು ಕಾರ್ಯನಿರ್ವಹಿಸಲು ಯೋಜನೆ ಪ್ರಸ್ತಾಪಿಸಿದ್ದು, ಸದರಿ ಉದ್ದೇಶಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 50 ಲಕ್ಷ ರೂ. ಕಾಯ್ದಿರಿಸಲಾಗಿದೆ.