ಮೈಸೂರು: ನಗರದಲ್ಲಿ ದಿಢೀರ್ ಆಗಿ ಸುರಿದ ಮಳೆಯಿಂದ ಜನ ಪರದಾಡುವಂತಾಯಿತು. ಬೆಳಗ್ಗಿನಿಂದ ಬಿಸಿಲಿನ ವಾತಾವರಣವಿದ್ದರೂ ಮಧ್ಯಾಹ್ನ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿಯಿತು. ಇದರಿಂದ ಭಾನುವಾರದ ರಜೆ ಮೂಡಲ್ಲಿದ್ದವರು ಗೊಣಗುವಂತಾಯಿತು.
ವಾರಾಂತ್ಯವಾಗಿದ್ದರಿಂದ ಜನ ನಗರದಲ್ಲಿ ಶಾಪಿಂಗ್ ಇನ್ನಿತರ ಖರೀದಿಗಾಗಿ ಬಂದಿದ್ದರೆ, ದೂರದಿಂದ ಪ್ರವಾಸಿಗರು ನಗರದತ್ತ ಮುಖ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಶುರುವಾದ ಮಳೆ ಮಳೆ ಬಿಡದೆ ಸುರಿದ ಕಾರಣ ಜನ ಹಿಡಿ ಶಾಪ ಹಾಕಿಕೊಂಡು ಓಡಾಡುವಂತಾಯಿತು.
ಆಸನಿ ಚಂಡಮಾರುತದ ವೇಳೆ ಸುಮಾರು ಹತ್ತು ದಿನಗಳ ಕಾಲ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರೀ ಮಳೆ ಸುರಿದಿತ್ತಲ್ಲದೆ, ಇದರಿಂದ ಭಾರಿ ನಷ್ಟವುಂಟಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಮಳೆ ದೂರವಾಗಿ ಬಿಸಿಲು ಕಾಣಿಸಿತ್ತು. ಆದರೆ ಭಾನುವಾರ ಮತ್ತೆ ಭಾರೀ ಮಳೆ ಸುರಿದಿದ್ದು ಇದರಿಂದ ನೀರು ಚರಂಡಿ ಮತ್ತು ರಸ್ತೆಗಳಲ್ಲಿ ನೀರು ತುಂಬಿ ಹರಿದಿದ್ದು ಇದರಿಂದ ವಾಹನಗಳು ತೆರಳಲು ಮತ್ತು ಪಾದಾಚಾರಿಗಳು ಓಡಾಡಲು ಕಷ್ಟ ಪಡುವಂತಾಯಿತು.
ಈಗಾಗಲೇ ನಗರಗಳಲ್ಲಿನ ರಸ್ತೆಗಳು ಗುಂಡಿ ಬಿದ್ದಿದ್ದರೆ ಮತ್ತೊಂದೆಡೆ ರಸ್ತೆಯನ್ನು ಅಗೆದು ಕೆಲಸವನ್ನು ಮಾಡುತ್ತಿರುವುದರಿಂದ ರಸ್ತೆಯ ಹಳ್ಳಕೊಳ್ಳಗಳಲ್ಲಿ ನೀರು ತುಂಬಿದ್ದು ವಾಹನ ಸಂಚರಿಸಲು ಭಯಪಡುವಂತಾಗಿದೆ. ಇನ್ನೊಂದೆಡೆ ಮಳೆ ನೀರಿನ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆ ಮೇಲೆ ನಿಂತಿರುವುದರಿಂದ ಜನ ಹಿಂಸೆ ಅನುಭವಿಸುವಂತಾಗಿದೆ.
ಮಧ್ಯಾಹ್ನ ಮೂರು ಗಂಟೆಯಿಂದ ಶುರುವಾದ ಮಳೆ ಸುರಿಯುತ್ತಲೇ ಇರುವುದರಿಂದ ಸಂಜೆ ನಗರಕ್ಕೊಂದು ಸುತ್ತು ಹೊಡೆದು ಬರೋಣ ಎಂದು ತೀರ್ಮಾನ ಮಾಡಿಕೊಂಡಿದ್ದವರು ಮನೆಯೊಳಗೆ ಕೂರುವಂತಾಗಿದೆ. ಕೆಲವು ದಿನಗಳಿಂದ ಬಿಸಿಲು ಕಾಣಿಸಿಕೊಂಡಿದ್ದರಿಂದ ಸದ್ಯಕ್ಕೆ ಮಳೆ ಬರೋದಿಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೀಗ ಭಾರೀ ಮಳೆ ಸುರಿಯುತ್ತಿರುವುದು ಆತಂಕ ತಂದಿದೆ.