ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದು ಆತಂಕಕಾರಿಯಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಹೆಚ್ಚಳ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಮತ್ತು ಈಗಾಗಲೇ ನಡೆಯುತ್ತಿರುವ ವಸ್ತು ಪ್ರದರ್ಶನ ಬಂದ್ ಸೇರಿದಂತೆ ಪ್ರಮುಖ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ತಿಳಿಸಿದ್ದಾರೆ.
ಅರಮನೆಗೆ ಒಂದು ಬಾರಿ 200ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವುದು. ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮಾರ್ಗ ಸೂಚಿಗಳ ಕಟ್ಟುನಿಟ್ಟಿನ ಪಾಲನೆ ಮಾಡುವಂತೆ ಕ್ರಮ ವಹಿಸುವುದು, ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆಯಲ್ಲದೆ, ಮೂರನೆ ಅಲೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತಂತೆಯೂ ವಿವರಿಸಿದರು. ಜಿಲ್ಲೆಯಲ್ಲಿ 1027 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ. 125 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಭಾನುವಾರ ಬಂದಿರುವ ಕೊರೋನಾ ಪರೀಕ್ಷೆಯ ವರದಿ ಪ್ರಕಾರ ಶೇ.5.62ರಷ್ಟು ಪಾಸಿಟಿವ್ ಇದೆ. ಆದರೆ ಒಂದು ವಾರದ ಡಾಟಾ ತಗೊಂಡರೆ ಜಿಲ್ಲೆಯಲ್ಲಿ 42584 ಟೆಸ್ಟ್ ಆಗಿದೆ. ಅದರಲ್ಲಿ 1064 ಪಾಸಿಟಿವ್ ಪ್ರಕರಣ ಬಂದಿದೆ. ಅಂದರೆ ಶೇ.2.5ರಷ್ಟು ಪಾಸಿಟಿವಿಟಿ ಇದೆ. ಕಳೆದೊಂದು ವಾರದ ಡಾಟಾ ತೆಗೆದು ನೋಡಿದರೆ ಶೇ. 2.5ರಷ್ಟಿದೆ. ಭಾನುವಾರದ್ದು ಮಾತ್ರ ತಗೊಂಡರೆ ಶೇ.5.62ರಷ್ಟು ಪಾಸಿಟಿವಿಟಿ ದರವಿರುವುದಾಗಿ ಹೇಳಿದರು.
ಲಸಿಕೆ ನೀಡಿಕೆ ಸಂಬಂಧಿಸಿದಂತೆ ಮಾಹಿತಿ ನೀಡಿ ಮೊದಲ ಕೊರೊನಾ ಡೋಸ್ ಪಡೆದಿರುವವರ ಪ್ರಮಾಣ ಶೇ.96.5ರಷ್ಟಿದೆ. ಎರಡನೇ ಡೋಸ್ ಪಡೆದವರ ಪ್ರಮಾಣ ಶೇ.82ರಷ್ಟಿದೆ. ಜಿಲ್ಲೆಯಲ್ಲಿ ಒಂದೂ ಡೋಸ್ ಪಡೆಯದ 90 ಸಾವಿರ ಮಂದಿ ಬಾಕಿ ಇದ್ದಾರೆ. ಇವರು ಕೊರೋನಾಗೆ ತುತ್ತಾಗೋದು ಶೇ.10 ಪಟ್ಟು ಹೆಚ್ಚಿದೆ. ದಯವಿಟ್ಟು ಒಂದೂ ಡೋಸ್ ಕೂಡ ಹಾಕಿಸಿಕೊಳ್ಳದವರು ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರಲ್ಲದೆ,ಬೂಸ್ಟರ್ ಡೋಸ್ ಪಡೆಯುವವರು 4.7ಲಕ್ಷ ಡೋಸ್ ಬಾಕಿ ಇದ್ದು ಇದು ಬೂಸ್ಟರ್ ಡೋಸ್ ಸೋಮವಾರದಿಂದ ಆರಂಭವಾಗಿದೆ ಎಂದರು.
ಜಿಲ್ಲೆಯಲ್ಲಿ 14ಸರ್ಕಾರಿ ಆಸ್ಪತ್ರೆಗಳಲ್ಲಿ 2048, 44ಖಾಸಗಿ ಆಸ್ಪತ್ರೆಗಳಲ್ಲಿ 1661, 21ಕೋವಿಡ್ ಕೇರ್ ಸೆಂಟರ್ ಗಳಲ್ಲಿ 2671 ಬೆಡ್ಸ್ ಸೇರಿದಂತೆ ಒಟ್ಟು 6380 ಹಾಸಿಗೆಗಳನ್ನು ವ್ಯವಸ್ಥೆ ಮಾಡಿದ್ದೇವೆ. ಇನ್ನೂ ಅವಶ್ಯಕತೆ ಬಂದಲ್ಲಿ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ.
17 ಆಕ್ಸಿಜನ್ ಪ್ಲಾಂಟ್ ಗಳಲ್ಲಿ 12 ಈಗಾಗಲೇ ಕಾರ್ಯ ಕೈಗೊಂಡಿದೆ. ಕಳೆದೆರಡು ದಿನಗಳಿಂದ ಸತತವಾಗಿ ಮಂಡಕಳ್ಳಿ ಕೋವಿಡ್ ಕೇರ್ ಸೆಂಟರ್ ಸಿದ್ಧಗೊಳಿಸಲಾಗಿದ್ದು ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಇಲ್ಲಿ 700 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ವಾರ್ ರೂಮ್ ಕೂಡ ಸಿದ್ಧವಾಗಿದೆ. ಈಗಾಗಲೇ 20 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಯವಿಟ್ಟು ಕೋವಿಡ್ ಪಾಸಿಟಿವ್ ಆದರೆ ಹೆದರಬೇಡಿ. ಸರ್ಕಾರಿ ಗೈಡ್ ಲೈನ್ ಪ್ರಕಾರ ಲಕ್ಷಣಗಳು ಕಡಿಮೆ ಬಂದರೆ ಹೋಂ ಐಸೋಲೇಶನ್, ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯಿರಿ, ನಿಜವಾಗಿಯೂ ಅವಶ್ಯಕತೆ ಇರುವವರಿಗೆ ಆಸ್ಪತ್ರೆಗೆ ದಾಖಲಾಗಿ. ಐಸೋಲೇಟ್ ಮಾಡಿಕೊಳ್ಳಿ, ಪಲ್ಸ್ ಆಕ್ಸಿಮೀಟರ್ ಮೂಲಕ ಚೆಕ್ ಮಾಡಿಕೊಂಡು 95ಕ್ಕಿಂತ ಕಡಿಮೆ ಇದ್ದರೆ ಆಸ್ಪತ್ರೆಗೆ ದಾಖಲಾಗಿ ಎಂದರಲ್ಲದೇ ಒಮಿಕ್ರಾನ್ ಅಷ್ಟೊಂದು ಅಪಾಯಕಾರಿಯಲ್ಲ, ಆಸ್ಪತ್ರೆಗೆ ದಾಖಲಾಗುವ ಸಂಭವ ಕಡಿಮೆ ಇರುತ್ತದೆ. ವೈದ್ಯರು ಹೇಳಿದ ನಿಯಮಗಳನ್ನು ಪಾಲಿಸಿ ಕೋವಿಡ್ ಬರದಂತೆ ಕೋವಿಡ್ ನಿಂದ ದೂರವಿರಿ ಎಂದು ಸಲಹೆ ನೀಡಿದರು.