News Karnataka Kannada
Tuesday, April 30 2024
ಮೈಸೂರು

ಅರಮನೆ ನಗರಿಗೆ ವಿದಾಯ ಹೇಳಿದ ಹೆಣ್ಣಾನೆಗಳು..

New Project 2021 12 16t080318.409
Photo Credit :

ಮೈಸೂರು: ಸರ್ಕಸ್ ಕಂಪನಿಯಿಂದ ರಕ್ಷಿಸಲ್ಪಟ್ಟು ಮೈಸೂರು ಅರಮನೆ ಆವರಣದಲ್ಲಿ ಪುನರ್ವಸತಿ ಪಡೆದಿದ್ದ  ಆರು ಹೆಣ್ಣಾನೆಗಳ ಪೈಕಿ ನಾಲ್ಕು ಆನೆಯನ್ನು ಗುಜರಾತ್‌ನ ಜಾಮ್‌ನಗರದಲ್ಲಿರುವ ಪುನರ್ವತಿ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಆ ಮೂಲಕ ಅವು ಅರಮನೆ ನಗರಿಗೆ ವಿದಾಯ ಹೇಳಿವೆ..

ಅರಮನೆ ಆವರಣದಲ್ಲಿ ಬದುಕು ಕಟ್ಟಿಕೊಂಡಿದ್ದವು

ಸೀತಾ(36), ರೂಬಿ(44), ಜೆಮಿನಿ(31) ಹಾಗೂ ರಾಜೇಶ್ವರಿ(27) ಎಂಬ ನಾಲ್ಕು ಹೆಣ್ಣಾನೆಗಳು ಗುಜರಾತ್ ಗೆ ಕೊಂಡೊಯ್ಯಲಾದ ಆನೆಗಳಾಗಿದ್ದು, ಚಂಚಲ ಮತ್ತು ಪ್ರೀತಿಯನ್ನು ಅರಮನೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಸುಮಾರು ಎರಡೂವರೆ ದಶಕಗಳಿಂದ ಅರಮನೆ ಆವರಣದಲ್ಲಿಯೇ ಬದುಕು ಕಟ್ಟಿಕೊಂಡಿದ್ದ  ಈ ಆನೆಗಳಿಗೆ ತಮ್ಮನ್ನು ಬೇರೆಡೆಗೆ ಸಾಗಿಸಲಾಗುತ್ತದೆ ಎಂಬುದು ಗೊತ್ತಾಗಲೇ ಇಲ್ಲ. ಜತೆಗೆ ಇವು ಲಾರಿಯನ್ನು ಹತ್ತಲು ಹಿಂದೇಟು ಹಾಕಿವೆ. ನಾಲ್ಕು ಆನೆಗಳನ್ನು ಬೇರೆಡೆಗೆ ಸಾಗಿಸುತ್ತಿರುವುದನ್ನು ಕಂಡ ಉಳಿದೆರಡು ಆನೆಗಳು ಚಡಪಡಿಸುತ್ತಿದ್ದವು.

ಇಷ್ಟಕ್ಕೂ ಮೈಸೂರು ಅರಮನೆಗೆ ಈ ಆನೆಗಳು ಬಂದಿದ್ದು ಹೇಗೆ? ,ಮತ್ತು ಇವುಗಳನ್ನು ಇಲ್ಲಿಂದ ಗುಜರಾತ್ ನ ಜಾಮ್‌ನಗರದಲ್ಲಿರುವ ಆನೆಗಳ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದೇಕೆ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡದಿರದು. ಇದಕ್ಕೆ ಉತ್ತರ ಸಿಗಬೇಕೆಂದರೆ ಒಂದೆರಡು ದಶಕಗಳ ಹಿಂದಿನ ದಿನಗಳಿಗೆ ಹೋಗಬೇಕು.

ಸರ್ಕಸ್‍ ನಿಂದ ರಕ್ಷಿಸಲ್ಪಟ್ಟಿದ್ದ ಹೆಣ್ಣಾನೆಗಳು

ಸುಮಾರು ಇಪ್ಪತೈದು ವರ್ಷಗಳ ಹಿಂದೆ ಸರ್ಕಸ್ ನಲ್ಲಿದ್ದ ಆರು ಹೆಣ್ಣಾನೆಗಳನ್ನು ರಕ್ಷಿಸಲಾಗಿತ್ತು. ಹೀಗೆ ರಕ್ಷಿಸಲ್ಪಟ್ಟ ಆನೆಗಳಿಗೆ ಮೈಸೂರಿನ ಅರಮನೆ ಆವರಣದಲ್ಲಿ ಪುನರ್ವಸತಿ ನೀಡಲಾಗಿತ್ತು. ಇವುಗಳ ಪೋಷಣೆಯನ್ನು ಅರಮನೆ ವತಿಯಿಂದ ಮಾಡಲಾಗುತ್ತಿತ್ತು. ಈ  ಪೈಕಿ ಕೆಲವು ಆನೆಗಳು ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರನ್ನು ಹೊತ್ತು ಸಾಗುತ್ತಿತ್ತು. ಇದರಿಂದ ಒಂದಷ್ಟು ಆದಾಯ ಬರುತ್ತಿತ್ತು.

ಮೊದಮೊದಲಿಗೆ ಎಲ್ಲವೂ ಸರಿಯಾಗಿ ನಡೆದಿತ್ತಾದರೂ ಕಳೆದ ಕೆಲವು ವರ್ಷಗಳಿಂದ ಆನೆಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಿತ್ತು. ಜತೆಗೆ ಅವುಗಳ ಆರೈಕೆ ಮಾಡುವುದು ಕಷ್ಟವಾಗಲಾರಂಭಿಸಿತ್ತು. ಆದರೂ ಶ್ರಮವಹಿಸಿ ಅವುಗಳನ್ನು ನೋಡಿಕೊಳ್ಳಲಾಗುತ್ತಿತ್ತು. ದಿನ ಕಳೆದಂತೆಲ್ಲ ಅವುಗಳ ಪೋಷಣೆ ಕಷ್ಟವಾಗಲಾರಂಭಿಸಿತು.

ಅರಮನೆಯಲ್ಲಿದ್ದ ಆನೆಗಳ  ರಕ್ಷಿಸುವಂತೆ ಅಭಿಯಾನ

ಇದೆಲ್ಲದರ ನಡುವೆ ಅರಮನೆಯಲ್ಲಿರುವ ಆನೆಗಳನ್ನು ರಕ್ಷಿಸುವಂತೆ ದೊಡ್ಡಮಟ್ಟದಲ್ಲಿ ಅಭಿಯಾನ ನಡೆಸಲಾಯಿತು. ಇದಕ್ಕೆ ಮನಸೋತಿದ್ದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ 2017ರ  ಮಾರ್ಚ್‌ನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಆರು ಆನೆಗಳಲ್ಲಿ ಮೂರು ಆನೆಗಳನ್ನಾದರೂ ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ಕೋರಿದ್ದರು.

ಮನವಿಯನ್ನು ಪುರಷ್ಕರಿಸಿ  ನಾಲ್ಕು ಹೆಣ್ಣಾನೆಗಳನ್ನು ಗುಜರಾತ್‌ನ ಜಾಮ್‌ನಗರದಲ್ಲಿರುವ ಆನೆಗಳ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲು ಗುಜರಾತ್‌ನ ಗಾಂಧಿನಗರದ ಚೀಫ್ ವೈಲ್ಡ್‌ಲೈಫ್ ವಾರ್ಡನ್ ಸೆ.1ರಂದು ನೋ ಅಬ್ಜಕ್ಷನ್(ನಿರಪೇಕ್ಷಣಾ) ಪತ್ರ ನೀಡಿದ್ದರು. ಈ ನಿಟ್ಟಿನಲ್ಲಿ ಮೈಸೂರು ರಾಜವಂಶಸ್ಥರು ಆನೆಯನ್ನು ಕಳುಹಿಸಿಕೊಡಲು ಮುಂದಾಗಿದ್ದು, ಈ ಸಂಬಂಧ ಮೈಸೂರಿನಿಂದ ಆನೆಯನ್ನು ಕಳುಹಿಸಿಕೊಡಲು ಕರ್ನಾಟಕ ಅರಣ್ಯ ಇಲಾಖೆಯ ಚೀಫ್ ವೈಲ್ಡ್‌ಲೈಫ್ ವಾರ್ಡನ್ ಅನುಮತಿ ಬೇಕಾಗಿತ್ತು.

ಆನೆಗಳನ್ನು ಕೊಂಡೊಯ್ಯಲು ಅನುಮತಿ

ಮೈಸೂರು ರಾಜಮನೆತನದ ಅನುಮತಿ ಕೋರಿ ಸಲ್ಲಿಸಿದ್ದ ಮನವಿ ಮೇರೆಗೆ ಆನೆ ಸಾಗಿಸಲು ಚೀಫ್ ವೈಲ್ಡ್‌ಲೈಫ್ ವಾರ್ಡನ್ ಡಿ.9ರಂದು ಅನುಮತಿ ನೀಡಿ, ಪ್ರಯಾಣದ ವೇಳೆ ಆನೆಯ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಹೀಗಾಗಿ ಅರಮನೆ ಆವರಣದಲ್ಲಿದ್ದ ಆರು ಆನೆಗಳ ಪೈಕಿ ಚಂಚಲ ಮತ್ತು ಪ್ರೀತಿ ಎಂಬ ಎರಡು ಆನೆಗಳನ್ನು ಉಳಿಸಿಕೊಂಡು ಉಳಿದಂತೆ ಸೀತಾ, ರೂಬಿ, ಜೆಮಿನಿ ಹಾಗೂ ರಾಜೇಶ್ವರಿ ಎಂಬ ನಾಲ್ಕು ಆನೆಗಳನ್ನು ಮಲ್ಟಿ ಆಕ್ಸೆಲ್ ಲಾರಿಯಲ್ಲಿ ಗುಜರಾತ್‌ಗೆ ಆನೆಗಳನ್ನು ಕೊಂಡೊಯ್ಯಲಾಗಿದೆ. ಇನ್ಮುಂದೆ ಈ ಆನೆಗಳು ಗುಜರಾತ್‌ನ ಜಾಮ್‌ ನಗರದಲ್ಲಿರುವ ಆನೆಗಳ ಪುನರ್ ವಸತಿ ಕೇಂದ್ರದಲ್ಲಿ ಇತರೆ ಆನೆಗಳೊಂದಿಗೆ ಬದುಕು ಸವೆಸಲಿದೆ.

ಗುಜರಾತಿನತ್ತ ನಾಲ್ಕು ಆನೆಗಳ ಪಯಣ

ಅರಮನೆಯಲ್ಲಿ ಅವುಗಳನ್ನು ಪೋಷಿಸಿಕೊಂಡು ಬಂದಿದ್ದ ಮಾವುತರಲ್ಲಿ ಬೇಸರ ಕಂಡು ಬಂದಿತು. ಎಲ್ಲಿಗೂ ತೆರಳದೆ ಒಂದೆರಡು ದಶಕಗಳಿಂದ ಅರಮನೆ ಆವರಣದಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಆನೆಗಳನ್ನು ಲಾರಿಗೆ ಹತ್ತಿಸುವುದು ಮಾವುತರು ಮತ್ತು ಅರಣ್ಯಾಧಿಕಾರಿಗಳಿಗೆ ಕಷ್ಟವಾಯಿತು. ಕೊನೆಗೂ ಅವುಗಳನ್ನು ಲಾರಿಗೆ ಹತ್ತಿಸಲಾಗಿದ್ದು, ಗುಜರಾತ್ ಗೆ ಪ್ರಯಾಣ ಬೆಳೆಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು