ಮೈಸೂರು: ಮೈಸೂರಿಗೆ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಿದ್ಧತೆಗಳು ಆರಂಭಗೊಂಡಿವೆ. ನಗರದ ಮುಖ್ಯರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಚುರುಕು ಪಡೆದಿದೆ. ಹಾರ್ಡಿಂಜ್ ವೃತ್ತದಿಂದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿ ಮುಚ್ಚಲಾಗುತ್ತಿದೆ. ಬಳಿಕ ಗ್ರಾಮಾಂತರ ಬಸ್ ನಿಲ್ದಾಣದಿಂದ ಫೌಂಟೇನ್ ವೃತ್ತದವರೆಗೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
ಈ ಕುರಿತಂತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವುದರಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಜೂ.8ರಂದು ಮೈಸೂರಿಗೆ ಆಗಮಿಸುವ ಸಿಎಂ ಬೊಮ್ಮಾಯಿ ಅವರು ರೂಪುರೇಷೆ ಅಂತಿಮಗೊಳಿಸಲಿದ್ದಾರೆ ಎಂದು ತಿಳಿಸಿದರು.
ಜೂ.೨೧ರಂದು ಮೈಸೂರಿಗೆ ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಅಧಿಕಾರಿಗಳು ಈಗಾಗಲೇ ಅರಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 12 ಸಾವಿರ ಜನ ಸಾರ್ವಜನಿಕರಿಗೆ ಹಾಗೂ 3 ಸಾವಿರ ಇತರ ಜನರಿಗೆ ಅವಕಾಶ ನೀಡುವ ಕುರಿತು ಚರ್ಚೆ ಆಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ 15 ಸಾವಿರ ಜನರಿಗೆ ಅವಕಾಶ ಕಲ್ಪಿಸಲಾಗುವುದು. ಈ ಕುರಿತು ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಮೋದಿ ಭೇಟಿ ವೇಳೆ ಮೈಸೂರಲ್ಲಿ ಬಿಗಿ ಭದ್ರತೆ
ಪ್ರಧಾನಿ ನರೇಂದ್ರ ಮೋದಿ ಮೈಸೂರು ಭೇಟಿ ವೇಳೆಯಲ್ಲಿ ಭದ್ರತೆ ಮತ್ತು ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಜೂ.20ರಂದು ಮೈಸೂರಿಗೆ ಭೇಟಿ ನೀಡಲಿದ್ದಾರೆ. 21ರಂದು ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಭದ್ರತಾ ಸಿಬ್ಬಂದಿ, ಎಸ್ಪಿಜಿ ಪಡೆ ನಿರ್ದೇಶನದ ಅನುಸಾರ ಭದ್ರತೆ ಕಲ್ಪಿಸಬೇಕಿದೆ. ಪ್ರಧಾನಿ ಆಗಮಿಸುವ, ನಿರ್ಗಮಿಸುವ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದರು.
ನಗರ ಪಾಲಿಕೆ, ಮುಡಾ, ಸೆಸ್ಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಧಾನಿ ಸಂಚರಿಸುವ ರಸ್ತೆಯಲ್ಲಿ ಒಣಗಿದ ಮರಗಳ ತೆರವು, ಪೆಟ್ಟಿ ಅಂಗಡಿಗಳ ಬಂದ್ ಮಾಡಬೇಕು. ಜತೆಗೆ ರಸ್ತೆ ಗುಂಡಿಗಳನ್ನು ಶೀಘ್ರದಲ್ಲಿಯೇ ಮುಚ್ಚಿಸಬೇಕು ಎಂದು ನುಡಿದರು.
ಠಾಣಾ ವ್ಯಾಪ್ತಿಯಲ್ಲಿ ಪ್ರತಿ ವ್ಯಕ್ತಿಯ ಚಲನವಲನದ ಬಗ್ಗೆ ನಿಗಾವಹಿಸಬೇಕು. ತುರ್ತು ಪರಿಸ್ಥಿತಿ ಹೊರತುಪಡಿಸಿ ಜೂ.20 21ರಂದು ರಜೆ ನೀಡಲಾಗುವುದಿಲ್ಲ. ರಾಡಿಸನ್ ಬ್ಲೂ ಹೋಟೆಲ್, ಅರಮನೆ ಆವರಣದ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಯೋಜನೆ ರೂಪಿಸಬೇಕು. ಅದನ್ನು ಎಸ್ಪಿಜಿ ಪಡೆಗೆ ನೀಡಿ ಅನುಮತಿ ಪಡೆಯಲಾಗುವುದು. ಇಡೀ ನಗರ ವ್ಯಾಪ್ತಿಯಲ್ಲಿ ಬಿಗಿ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.