ಮೈಸೂರು: ಪ್ರತಿವರ್ಷವೂ ಸಂಕ್ರಾಂತಿ ಹಬ್ಬವನ್ನು ಅರಮನೆ ನಗರಿ ಜನ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರಾದರೂ ಈ ಬಾರಿ ಕೊರೊನಾ ಕಾರಣದಿಂದ ಜನ ಸರಳವಾಗಿ ಆಚರಿಸುತ್ತಿದ್ದು, ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ಮಾತ್ರ ಗಗನಕ್ಕೇರಿದೆ.
ಹಬ್ಬಕ್ಕೆ ಒಂದೆರಡು ದಿನ ಇರುವಾಗಲೇ ವ್ಯಾಪಾರ ವಹಿವಾಟು ಗರಿಗೆದರುತ್ತಿತ್ತು. ಆದರೆ ಈ ಬಾರಿ ಮೊದಲಿನ ಸಡಗರ ಇಲ್ಲವಾದರೂ ಒಂದಷ್ಟು ವ್ಯಾಪಾರ ನಡೆಯುತ್ತಿದೆ.
ನಗರದ ವಿವಿಧ ಭಾಗಗಳಲ್ಲಿರುವ ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ವೃತ್ತ, ಶಿವಾರಾಂ ಪೇಟೆ, ವಾಣಿವಿಲಾಸ, ಮಂಡಿ ಮಾರ್ಕೆಟ್, ಅಗ್ರಹಾರ ವೃತ್ತ, ನಂಜುಮಳಿಗೆ ವೃತ್ತ ಸೇರಿದಂತೆ ಪ್ರಮುಖ ಮಾರುಕಟ್ಟೆ, ವೃತ್ತಗಳು ಹಾಗೂ ರಸ್ತೆ ಬದಿಯಲ್ಲಿ ಹಬ್ಬಕ್ಕೆ ಬೇಕಿರುವ ಅಗತ್ಯ ವಸ್ತುಗಳ ವ್ಯಾಪಾರ ನಡೆಯುತ್ತಿದ್ದು ಗ್ರಾಹಕರು ಹೂ, ಹಣ್ಣು, ಕಬ್ಬು, ಎಳ್ಳು-ಬೆಲ್ಲ-ಕೊಬ್ಬರಿ, ಹೊಸ ಬಟ್ಟೆ ಸೇರಿದಂತೆ ಇತರೆ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಕ್ರಾಂತಿಯ ಪ್ರಮುಖ ಆಕರ್ಷಣೆ ಎಳ್ಳು ಬೆಲ್ಲ ಬೀರಲು ಬೇಕಾದ ಎಳ್ಳು-ಬೆಲ್ಲ-ಕೊಬ್ಬರಿ ಮಿಕ್ಸ್ ಮತ್ತು ಕಬ್ಬಿನ ಜಲ್ಲೆಯ ವ್ಯಾಪಾರವೂ ನಡೆಯುತ್ತಿದೆ.
ಸಂಕ್ರಾಂತಿಗೆ ಕಬ್ಬು ಮತ್ತು ಬೆಲ್ಲಕ್ಕೆ ಹೆಚ್ಚಿನ ಬೇಡಿಕೆಯಿರುವುದರಿಂದ ಗ್ರಾಮೀಣ ಪ್ರದೇಶದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬಿನ ಜಲ್ಲೆಗಳನ್ನು ತಂದು ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ದೇವರಾಜ ಮಾರುಕಟ್ಟೆಯಲ್ಲಿ ಕಬ್ಬಿನ ಜಲ್ಲೆಯ ಉದ್ದ ಮತ್ತು ದಪ್ಪದ ಅನುಗುಣವಾಗಿ ಒಂದು ಜಲ್ಲೆಗೆ 10, 20, 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದೇ ಕಬ್ಬಿಗೆ ಅಗ್ರಹಾರ ಸೇರಿದಂತೆ ಇತರೆಡೆ 50ರಿಂದ 60 ರೂ. ಮಾರಾಟ ಮಾಡುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಗ್ರಾಹಕರು ಕೂಡ ಹೆಚ್ಚಾಗಿ ಖರೀದಿಸುತ್ತಿಲ್ಲ. ಸಂಪ್ರದಾಯಕ್ಕಷ್ಟೆ ಹಬ್ಬವನ್ನು ಸೀಮಿತಗೊಳಿಸಿದ್ದಾರೆ.
ಎಳ್ಳು-ಬೆಲ್ಲ ಮಿಶ್ರಣದ ಒಂದು ಕೆಜಿಯ ಪ್ಯಾಕೆಟ್ಗೆ 160 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಕೆಲವರು ಎಳ್ಳು ಬೆಲ್ಲ ಮಿಕ್ಸ್ ಪ್ಯಾಕೆಟ್ ಕೊಂಡರೆ, ಬಹುತೇಕರು ಮಿಕ್ಸ್ಗೆ ಬೇಕಾದ ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆ ಬೀಜ, ಸಕ್ಕರೆ ಅಚ್ಚ, ಕಲ್ಲು ಸಕ್ಕರೆ ಹಚ್ಚು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಖರೀದಿಸಿ ಮನೆಯಲ್ಲಿಯೇ ಮಿಶ್ರಣ ಮಾಡುತ್ತಿದ್ದಾರೆ. ಬೆಲೆಗಳು ಕೂಡ ದಿಢೀರ್ ಏರಿಕೆಯಾಗಿದ್ದು, ಒಂದು ಕೆಜಿ ಎಳ್ಳಿಗೆ 280 ರೂ., ಕತ್ತರಿಸಿದ ಬೆಲ್ಲ ಕೆಜಿಗೆ 120 ರೂ., ಕಡಲೆ ಬೀಜ (ಬೆಳೆ) ಕೆಜಿಗೆ 160, ಉಂಡೆ ಕಡಲೇ ಬೀಜ ಕೆಜಿಗೆ 100 ರೂ. ಕತ್ತರಿಸಿದ ಕೊಬ್ಬರಿ ಕೆಜಿಗೆ 150 ರೂ.ಗೆ ಮಾರಾಟ ಮಾಡಲಾಗುತ್ತಿದ್ದು ಅಂಗಡಿಗಳ ಮುಂದೆ. ಬಣ್ಣ ಬಣ್ಣದ ಹಾಗೂ ವಿವಿಧ ಆಕೃತಿಯ ಕಲ್ಲು ಸಕ್ಕರೆ ಅಚ್ಚುಗಳನ್ನು ಜೋಡಿಸಿಡಲಾಗಿದ್ದು ಗ್ರಾಹಕರನ್ನು ಆಕರ್ಷಿಸುತ್ತಿದೆ.
ಹಬ್ಬ ಸರಳವಾಗಿ ಆಚರಿಸುತ್ತಿದ್ದರೂ ಬೆಲೆ ಗಗನಕ್ಕೇರಿದೆ. ಹೂವಿನ ಬೆಲೆ ದುಪ್ಪಟ್ಟಾಗಿದ್ದು, ಸಾಮಾನ್ಯ ದಿನಕ್ಕಿಂತ 30ರಿಂದ 50ರೂ. ಏರಿಕೆಯಾಗಿದೆ. ಸೇವಂತಿಗೆ 80-100 ರೂ. ಮಲ್ಲಿಗೆ ಮೀಟರ್ಗೆ 100 ರೂ., ಕನಕಾಂಬರ, ಕಾಕಡ 50 ರೂ. ಹಾಗೂ ಬಾಳೆ ಹಣ್ಣು ಕೆಜಿಗೆ 60 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕೆಲವರು ಎಳ್ಳು ಬೆಲ್ಲ ಬೀರಿನ ಜತೆ ಕಿತ್ತಳೆಹಣ್ಣನ್ನು ನೀಡುವುದರಿಂದ ಕಿತ್ತಳೆ ಕೆಜಿ 100 ರೂ. ಆಗಿದೆ.
ಬಟ್ಟೆ ಅಂಗಡಿಯಲ್ಲಿಯೂ ಜನ ಕಂಡು ಬರುತ್ತಿದ್ದಾರೆ. ಕೊರೊನಾ ಮಾರ್ಗಸೂಚಿಯನ್ನು ಕೆಲವರು ಉಲ್ಲಂಘಿಸುತ್ತಿರುವುದು ಅಲ್ಲಲ್ಲಿ ಕಾಣಿಸುತ್ತಿದೆ.