ಮೈಸೂರು: ಮಹಾ ಶಿವರಾತ್ರಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರು ನಗರಾದಾದ್ಯಂತ ಸಾರ್ವಜನಿಕರು ಆಚರಿಸಲಾಗುತ್ತಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ, ಶಾಂತಿಗೆ ಭಂಗ ಉಂಟಾಗದಂತೆ ಹಬ್ಬ ಆಚರಣೆ ಮಾಡಬೇಕು ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೂಚನೆ ನೀಡಿದ್ದಾರೆ.
ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಅರಮನೆ ತ್ರಿನೇಶ್ವರಸ್ವಾಮಿ ದೇವಾಲಯ, ಕಾಮಕಾಮೇಶ್ವರಿ ದೇವಾಲಯ, ಗುರುಕುಲ ದೇವಸ್ಥಾನ ಸೇರಿದಂತೆ ಇನ್ನಿತರ ದೇಗುಲಕ್ಕೆ ತೆರಳಿ ರಾತ್ರಿ ಪೂರ ಜಾಗರಣೆ ಮಾಡುವುದು ಸಾಮಾನ್ಯವಾಗಿರುತ್ತದೆ. ಈ ವೇಳೆ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಹಲವು ಸೂಚನೆಗಳನ್ನು ಪಾಲಿಸುವಂತೆ ಅವರು ಸೂಚಿಸಿದ್ದು, ಯಾವುದೇ ಅಹಿತಕರ ಘಟನೆ, ಶಾಂತಿಭಂಗಕ್ಕೆ ಯತ್ನಿಸುವ ಕಿಡಿಗೇಡಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಗರ ಪೊಲೀಸ್ ವತಿಯಿಂದ ಎಲ್ಲಾ ರೀತಿಯ ಪೊಲೀಸ್ ಬಂದೋಬಸ್ತ್ ಮತ್ತು ಗಸ್ತು ವ್ಯವಸ್ಥೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಕೃತ್ಯಗಳು ಕಂಡ ಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ.100, 2418139, 2418339ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ ನಗರದ ಶಾಂತಿ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ತಿಳಿಸಿದ್ದಾರೆ.
ಇನ್ನು ಮಹಿಳೆಯರು ತಮ್ಮ ಆಭರಣ ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರುವುದು ಹಾಗೂ ಆ ವೇಳೆಯಲ್ಲಿ ಚಿನ್ನಾಭರಣ ಧರಿಸಿಕೊಂಡು ಒಂಟಿಯಾಗಿ ಓಡಾಡಬಾರದು. ರಸ್ತೆಯಲ್ಲಿ ವಾಹನಗಳ ವ್ಹೀಲಿಂಗ್ ಮಾಡುವುದು, ಅಜಾಗರುಕತೆ ಮತ್ತು ಅತಿಯಾದ ವೇಗವಾಗಿ ವಾಹನ ಚಾಲನೆ ಮಾಡುವುದನ್ನು ನಿಷೇಧಿಸಿದೆ. ಆಟೋರಿಕ್ಷಾ ಮತ್ತು ಕ್ಯಾಬ್ ವಾಹನದವರು ಸಾರ್ವಜನಿಕರು ಕರೆದ ಕಡೆ ಬರಲು ನಿರಾಕರಿಸುವುದು, ಹೆಚ್ಚಿನ ಹಣಕ್ಕಾಗಿ ಪೀಡಿಸುವುದು ಮಾಡಬಾರದು. ಮಹಿಳೆಯರು ಮತ್ತು ಹೆಣ್ಣು ಮಕ್ಕಳೊಂದಿಗೆ ಪುಂಡಪೋಕರಿಗಳು, ಯುವಕರು ಅಸಭ್ಯವಾಗಿ ವರ್ತಿಸಬಾರದು. ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡುವಂತಹ ಕೃತ್ಯಗಳನ್ನು ಮಾಡಬಾರದು. ರಸ್ತೆಗೆ ಅಡ್ಡಲಾಗಿ ಚಲನಚಿತ್ರಗಳನ್ನು ಪ್ರದರ್ಶಿಸುವುದು, ಅನುಮತಿ ಇಲ್ಲದೇ ಮತ್ತು ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇದಿಸಿದೆ. ಜಾಗರಣೆ ಆಚರಿಸುವ ನೆಪದಲ್ಲಿ ಜೂಜಾಟಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಜಾಗರಣೆ ಮಾಡಲು ಹೋಗುವ ಮಹಿಳೆಯರು, ಹೆಣ್ಣು ಮಕ್ಕಳಿಗೆ ಕಿರಿಕಿರಿಯನ್ನುಂಟು ಮಾಡುವ ಪ್ರಸಂಗ ನಡೆದರೆ ತಕ್ಷಣ ಕರೆ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.