ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನೆ ಅಡಿಯಲ್ಲಿ ರಂಗಾಯಣ ಜನಪದರು ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಜನಪರ ಉತ್ಸವ ಶನಿವಾರ ಆರಂಭಗೊಂಡಿದೆ.
ಹಿರಿಯ ಅಂಧ ಕಲಾವಿದೆ ಸೋಬಾನೆ ಗೌರಮ್ಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ 10 ದಿನಗಳ ಕಾಲ ನಡೆಯುವ ಶಿಲ್ಪಕಲಾ ಶಿಬಿರಕ್ಕೆ ಶಿಲ್ಪಕೆತ್ತನೆ ಮಾಡುವ ಮೂಲಕ ಚಾಲನೆ ನೀಡಿದರು.
ಉತ್ಸವದಲ್ಲಿ 50ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಳ್ಳಲಿದ್ದು, 900ಕ್ಕೂ ಹೆಚ್ಚು ಪರಿಶಿಷ್ಟ ಜನಪದ ಕಲಾವಿದರು ಪಾಲ್ಗೊಂಡಿದ್ದಾರೆ. ಸಾಂಸ್ಕೃತಿಕ ನಗರಿಯ ಜನತೆಗೆ ಜನಪದ ಕಲೆಗಳ ರಸದೌತಣ ಉಣಬಡಿಸುತ್ತಿದ್ದು. ಮಾ.೬ರ ಭಾನುವಾರವೂ ಕಲಾಪ್ರದರ್ಶನ ಮುಂದುವರಿಯಲಿದೆ.
ಡೊಳ್ಳು, ನಗಾರಿ, ತಮಟೆ, ಕಂಸಾಳೆ, ಪೂಜಾಕುಣಿತ, ಚಂಡೆ ಮೇಳ, ಹಲವು ಜನಪದ ಕಲೆಗಳು ಗಮನ ಸೆಳೆದವು. ಸುಳ್ಯ ಮಂಜುನಾಥ್ ಮತ್ತು ತಂಡದಿಂದ ಕರಗೋಲು, ಮೈಸೂರಿನ ಮಧುಸೂಧನ ಮತ್ತು ತಂಡದಿಂದ ಕಂಸಾಳೆ, ಮಾಗಡಿ ಕೆಂಪಮ್ಮ ಮತ್ತು ತಂಡದಿಂದ ಪಟಕುಣಿತ, ರಾಮನಗರ ಚಂದ್ರಶೇಖರ್ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ, ಮದ್ದೂರು ಲಿಂಗರಾಜು ಮತ್ತು ತಂಡದಿಂದ ತಮಟೆ, ಹುಣಸೂರಿನ ಪುರುಷೋತ್ತಮ್ ಮತ್ತು ತಂಡದಿಂದ ನಗಾರಿ, ಬಳ್ಳಾರಿಯ ರಾಮು ಮತ್ತು ತಂಡದಿಂದ ಹಗಲುವೇಷ, ಸಾಗರದ ನಿರ್ಮಲಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ಮಳವಳ್ಳಿ ಪುನೀತ್ಕುಮಾರ್ ಮತ್ತು ತಂಡದಿಂದ ಕೊಂಬು ಕಹಳೆ, ಹಾಸನದ ರಂಜಿತಾ ಮತ್ತು ತಂಡದಿಂದ ಮಹಿಳಾ ವೀರಗಾಸೆ, ಕನಕಪುರದ ಪರಶುರಾಮನಾಯಕ ಮತ್ತು ತಂಡದಿಂದ ಪೂಜಾಕುಣಿತ, ಕೊಡಗಿನ ಶ್ರೀನಿವಾಸ್ ಮತ್ತು ತಂಡದಿಂದ ಕೊಡವ ವಾಲಗ, ಬೆಂಗಳೂರಿನ ಕೃಷ್ಣಮೂರ್ತಿ ಮತ್ತು ತಂಡದಿಂದ ಹುಲಿವೇಷ ಕುಣಿತ, ಬೆಳಗಾವಿಯ ಶಶಿಧರ ಭಜಂತ್ರಿ ಮತ್ತು ತಂಡದಿಂದ ಕರಡಿ ಮಜಲು ಹಾಗೂ ತುಮಕೂರಿನ ತ್ಯಾಗರಾಜು ಮತ್ತು ತಂಡದಿಂದ ಸೋಮನಕುಣಿತ ಲಾವಣಿ ಮುಂತಾದವು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು.
ಉಡುಪಿಯ ಗುರುಚರಣ್ ಪೊಲಿಪು ತಂಡದ ಕಂಗೀಲು ನೃತ್ಯದಿಂದ ಆರಂಭವಾದ ಜನಪರ ಉತ್ಸವ ಚಿಕ್ಕಮಗಳೂರಿನ ಶೃತಿ ಮತ್ತು ತಂಡದಿಂದ ಮಹಿಳಾ ವೀರಗಾಸೆ, ರಾಮನಗರದ ಕೆ.ಎಚ್.ಶಿವಣ್ಣ ಮತ್ತು ತಂಡದಿಂದ ಡೊಳ್ಳು, ಕೋಲಾರದ ಬಂಗಾರಪೇಟೆ ರವಿ ಮತ್ತು ತಂಡದ ತಮಟೆ, ನಗಾರಿ ನೃತ್ಯಗಳು ಜನತೆಗೆ ಮುದನೀಡಿತು. ಡೊಳ್ಳುಕುಣಿತ, ಗೊರವರ ಕುಣಿತ, ಕಂಸಾಳೆ ಕಲಾವಿದರು ನೋಡುಗರ ಹುಬ್ಬೇರುವಂತೆ ನರ್ತಿಸಿದರು. ಸವಿ ಸಂಜೆಯಲ್ಲಿ ಸುಮಾರು ೨೦ ನಿಮಿಷಕ್ಕೂ ಹೆಚ್ಚುಕಾಲ ಒಂದೇ ವೇದಿಕೆಯಲ್ಲಿ ಕಂಡ ಹಲವು ತಂಡಗಳ ನೃತ್ಯ ಮತ್ತೊಮ್ಮೆ ನೋಡುವ ಅಭಿಲಾಷೆ ಮೂಡಿಸಿತು. ಗೊರವರ ಕುಣಿತದ ಕಲಾವಿದರು ನೈಜ ವೇಷದ ಮೂಲಕ ತಮ್ಮ ಕಲಾ ನೈಪುಣ್ಯತೆ ಮೆರೆದರು.