ಮೈಸೂರು: ವಿಶ್ವಶಾಂತಿ, ಲೋಕಲ್ಯಾಣದ ಸದಾಶಯದ ಹಾಗೂ ಗಣಪತಿ ಸಚ್ಚಿದಾನಂದ ಸ್ವಾಮೀಜಿ 80ನೇ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಮೇಕೆದಾಟಿನಿಂದ ಮೈಸೂರುವರೆಗಿನ ಪಾದಯಾತ್ರೆ ಬುಧವಾರ ಮುಕ್ತಾಯಗೊಂಡಿದೆ.
ಗಣಪತಿ ಆಶ್ರಮದ ಕಿರಿಯ ಮಠಾಧೀಶ ದತ್ತ ವಿಜಯಾನಂದ ತೀರ್ಥರು ಮೇ 13ರಂದು ಮೇಕೆದಾಟಿನಿಂದ ಮೈಸೂರಿನತ್ತ ಪಾದಯಾತ್ರೆ ಆರಂಭಿಸಿದರು. 6 ದಿನಗಳ ಕಾಲ ನಡೆದ ಪಾದಯಾತ್ರೆ ಬುಧವಾರ ಅಂತ್ಯಗೊಂಡಿದೆ. 200ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಗಣಪತಿ ಸಚ್ಚಿದಾನಂದ ಶ್ರೀಗಳ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಶ್ರೀಗಳ ಹುಟ್ಟೂರಾದ ಕನಕಪುರ ತಾಲೂಕಿನ ಮೇಕೆದಾಟು ಸಂಗಮ ಕ್ಷೇತ್ರದಿಂದ ಪಾದಯಾತ್ರೆ ಆರಂಭಿಸಲಾಗಿತ್ತು. ಬುಧವಾರ ಮುಂಜಾನೆ ಮೈಸೂರಿಗೆ ಪಾದಯಾತ್ರೆ ಆಗಮಿಸಿತು. ಮಾರ್ಗಮಧ್ಯದಲ್ಲಿ ಕುರುಬಾರಹಳ್ಳಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಊಟಿ ರಸ್ತೆಯಲ್ಲಿರುವ ಆಶ್ರಮದಲ್ಲಿ ನಡಿಗೆ ಮುಕ್ತಾಯಗೊಂಡಿತು.
ಕಿರಿಯ ಶ್ರೀಗಳನ್ನು ಶಾಸಕ ಎಸ್.ಎ.ರಾಮದಾಸ್, ನಗರಪಾಲಿಕೆ ಸದಸ್ಯ ಕೆ.ಜೆ.ರಮೇಶ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಕೇಬಲ್ ಮಹೇಶ್, ಅಪೂರ್ವ ಸುರೇಶ್, ಮೋಹನ್, ಹರೀಶ್, ಶ್ಯಾಮ್, ಕುರುಬರಳ್ಳಿ ಮಂಜಣ್ಣ ಮುಂತಾದವರು ಸ್ವಾಗತಿಸಿದರು.