ಮೈಸೂರು: ಪ್ರಕೃತಿಯನ್ನು ಒಳಗಣ್ಣಿನಿಂದ ನೋಡಿದರೆ ಮಾತ್ರ ಭಾವನೆ ಮೂಡಲು ಸಾಧ್ಯ ಎಂಬುದನ್ನು ವರಕವಿ ದ.ರಾ.ಬೇಂದ್ರ ತಮ್ಮ ಕವನ ಮತ್ತು ಕಾವ್ಯಗಳಿಂದ ನಿರೂಪಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಬಣ್ಣಿಸಿದ್ದಾರೆ.
ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಮ್ಮಿ ಕೊಂಡಿದ್ದ ದ.ರಾ.ಬೇಂದ್ರೆ 126ನೇ ಜಯಂತಿ ಅಂಗವಾಗಿ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಬೇಂದ್ರೆಯ ನೆನಪು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಬೇಂದ್ರೆ ಅವರು ಪ್ರಪಂಚದಲ್ಲಿ ಕನ್ನಡ ಸೇವೆಗೆ ಇರುವ ಅವಕಾಶ ಬಳಸಿಕೊಂಡು ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಬೇಂದ್ರೆಯವರು ಸಾಹಿತ್ಯ, ಕೃತಿ, ನಾಟಕ. ಕವನ, ಕಾವ್ಯದ ಮೂಲಕ ನೊಂದ ಜೀವಗಳಲ್ಲಿ ಬದುಕಿನ ಉತ್ಸಾಹದ ಚಿಲುಮೆ ಉಕ್ಕಿಸಿದರು. ಅವರು ಕವಿ, ಸಾಹಿತಿಯಷ್ಟೇ ಆಗಿರಲಿಲ್ಲ, ಇತಿಹಾಸಕಾರ, ಸಂಸ್ಕೃತ ವಿದ್ವಾಂಸ, ಭೌತಶಾಸ್ತ್ರ, ಗಣಿತ ತಜ್ಞ, ಸಂಖ್ಯಾಶಾಸ್ತ್ರ, ತತ್ವಜ್ಞಾನಿ ಹೀಗೆ ಅವರದು ಬಹುಮುಖ ವ್ಯಕ್ತಿತ್ವ. ಅವರ ಕವನ, ಕಾವ್ಯವು ಜನಪದ ಸೊಗಡು ಹಾಗೂ ಪ್ರಾಸದಿಂದ ಕೂಡಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಡಾ. ವೈ ಡಿ ರಾಜಣ್ಣ ಮಾತನಾಡಿ ದ.ರಾ.ಬೇಂದ್ರೆಯವರು ಕವಿಯಾಗಿ ಕಥೆಗಾರರಾಗಿ ನಾಟಕಕಾರರಾಗಿ ತಮ್ಮ ಸಾಹಿತ್ಯದ ಉದ್ದಕ್ಕೂ ಬದುಕಿನ ಅನುಭವದ ಪಾಠವನ್ನು ಕಾವ್ಯದ ಪಾಕದ ಮೂಲಕ ಕನ್ನಡಿಗರಿಗೆ ಸಾಹಿತ್ಯವನ್ನ ಸಾಹಿತ್ಯದ ಶ್ರೇಷ್ಠತೆಯನ್ನು ಕೊಟ್ಟಂತವರು ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಮಾತನಾಡಿ ಬೇಂದ್ರಯವರ ಕವಿತೆಗಳು ಮುತ್ತಿನ ಹಾರದಂತಿವೆ. ಅವರ ನಾಡು, ನುಡಿ, ಭಾಷೆ, ಸಂಸ್ಕೃತಿ ಪರಂಪರೆಯಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಅವರು ನಾಡಿನ ಸಮಸ್ತ ಮನುಕುಲಕ್ಕೆ ಕನ್ನಡದ ಕಾವ್ಯ ಹಾಗೂ ಸಾಹಿತ್ಯದ ಬೆಳಕು ಚೆಲ್ಲಿದರು. ಅಂತರಂಗದ ಮೃದಂಗ ಬಿಡಿಸಿ ಸರ್ವರ ಹೃದಯದಲ್ಲಿ ಗಾನ ಲಹರಿ ಹರಿಸಿದರು ಎಂದರು.
ಚುಟುಕು ಸಾಹಿತ್ಯ ಪರಿಷತ್ ನ ರಾಜ್ಯ ಸಂಚಾಲಕ ಡಾ.ಎಂ.ಜಿ.ಆರ್ .ಅರಸ್, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಗೋಲ್ಡ್ ಸುರೇಶ್, ವಿದ್ಯಾರಣ್ಯ ಸಂಸ್ಥೆಯ ರವಿಶಂಕರ್, ಜೀವದರ ಗಿರೀಶ್, ವಿನಯ್ ಕಣಗಾಲ್, ಸುಚೇಂದ್ರ, ಪುರುಷೋತ್ತಮ್, ಮಹೇಂದ್ರ ಎಂ. ಶೈವಾ, ಚಕ್ರಪಾಣಿ, ನವೀನ್ ಕೆಂಪಿ, ವೆಂಕಟೇಶ್ವರ ವರ್ಕೇಡಿ ಇನ್ನಿತರರು ಹಾಜರಿದ್ದರು