ಮೈಸೂರು ; ಸಾವಿರಾರು ಮೈಲುಗಳ ದೂರದಿಂದ ಬಂದು ಭಾರತದಲ್ಲಿ ಆಶ್ರಯ ಪಡೆದು ಬದುಕು ಕಟ್ಟಿಕೊಂಡಿರುವ ಟಿಬೇಟಿಯನ್ನರದು ವೈವಿದ್ಯಮಯ ಬದುಕು. ವಿವಿಧ ಆಚರಣೆಗಳೊಂದಿಗೆ ತಮ್ಮ ಹೊಸ ವರ್ಷವನ್ನೂ ಅವರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ನಮ್ಮ ಜಿಲ್ಲೆಯ ಪಕ್ಕದ ಬೈಲು ಕುಪ್ಪೆ ಸಾವಿರಾರು ಟಿಬೇಟಿಯನ್ನರ ಆಶ್ರಯತಾಣ ವಾಗಿದ್ದು ಹಿಮಾಚಲ ಪ್ರದೇಶದ ಧರ್ಮಶಾಲ ನಂತರ ದೇಶದ ಎರಡನೇ ಅತೀ ಹೆಚ್ಚು ಟಿಬೇಟಿಯನ್ನರು ಇಲ್ಲಿ ವಾಸಿಸುತಿದ್ದಾರೆ. ಬೌದ್ದ ಧರ್ಮವನ್ನು ಪಾಲಿಸುವ ಟಿಬೇಟಿಯನ್ನರು ಮತ್ತು ಲಢಾಕ್ ಪ್ರದೇಶದ ಜನರೂ ಲೋಸಾರ್ ಹಬ್ಬವನ್ನು ಆಚರಿಸುತ್ತಾರೆ. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಆಚರಿಸಲಾಗುವ ಈ ಹಬ್ಬವನ್ನು 15 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳಿಯ ಜಲಮೂಲಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಇದೆ.
ಈ ವರ್ಷ ಮಾರ್ಚ್ 3 ರ ಗುರುವಾರ ಆರಂಭಗೊಂಡಿರುವ ಹಬ್ಬ ಮಾರ್ಚ್ 18 ರ ವರೆಗೆ ಅಂದರೆ ಮುಂದಿನ ಪೂರ್ಣಿಮೆವರೆಗೆ ನಡೆಯಲಿದೆ. ಟಿಬೆಟಿಯನ್ನರು ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ ಗೂತೂರ್ ಹೆಸರಿನ ಆಚರಣೆಯನ್ನುಆಚರಿಸುವ ಸಂಪ್ರದಾಯವಿದೆ. ಗೂತೂರ್ ಆಚರಣೆಯ ಮೂಲಕ ದುಷ್ಟ ಶಕ್ತಿಗಳನ್ನು ನಿಗ್ರಹಿಸಲಾಗುತ್ತದೆ. ಈ ಆಚರಣೆ ನಡೆಸಲಾಗಿದ್ದು ಇದಕ್ಕಾಗಿ ಬೌದ್ದ ಸನ್ಯಾಸಿಗಳಿಂದ ದಿನವಿಡಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಟಿಬೆಟಿಯನ್ನರು ಹುಲಿ ಮುಖವಾಡ ಸೇರಿ ಹಲವು ವೇಷಗಳನ್ನು ಧರಿಸಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಈ ವರ್ಷದ ಆಚರಣೆಯಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ಬೈಲುಕೊಪ್ಪಕ್ಕೆ ಲಡಾಕ್ ಬಿಜೆಪಿ ಲೋಕಸಭಾ ಸದಸ್ಯ ಜಮ್ಯಮ್ ತ್ಸೇರಿಂಗ್ ನ್ಯಾಮಗಲ್ ಭಾಗಿಯಾಗಿದ್ದು ವಿಶೇಷ ಆಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಟಿಬೇಟಿಯನ್ನರ ಸಮಸ್ಯೆಗಳಿಗೆ ಕರ್ನಾಟಕ ಹಾಗೂ ಭಾರತ ಸರ್ಕಾರ ಎಲ್ಲ ರೀತಿಯಿಂದಲೂ ಸ್ಪಂದಿಸುವುದೆಂದು ಭರವಸೆ ನೀಡಿದರು. ಟಿಬೇಟಿಯನ್ನರು ಸ್ಥಳೀಯರ ಜತೆ ಇದೇ ರೀತಿಯ ಉತ್ತಮ ಭಾಂಧವ್ಯವನ್ನು ಮುಂದೆಯೂ ಹೊಂದಬೇಕೆಂದು ಅವರು ಕರೆ ನೀಡಿದರು. ಇಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಅರುಣಾಚಲ , ಸಿಕ್ಕಿಂ ಹಾಗೂ ಲಢಾಕ್ ಪ್ರಾಂತ್ಯದ ಭಾರತೀಯ ವಿದ್ಯಾರ್ಥಿಗಳನ್ನು ಅವರು ಭೇಟಿ ಮಾಡಿದರು. ನಂತರ ಲೋಕಸಭಾ ಸದಸ್ಯರು ಹುಣಸೂರು ಸಮೀಪದ ಗುರುಪುರ ಕ್ಯಾಂಪಿಗೂ ಭೇಟಿ ನೀಡಿ ಉತ್ತರ ಕನ್ನಡ ದ ಮುಂಡಗೋಡ ಟಿಬೇಟನ್ ಕ್ಯಾಂಪಿಗೆ ತೆರಳಿದರು.
ಟಿಬೇಟಿಯನ್ನರ ಹೊಸ ವರ್ಷದ ಆಚರಣೆಗೆ ಕಳೆದ ಎರಡು ವರ್ಷಗಳಿಂದ ಬ್ರೇಕ್ ಬಿದ್ದಿತ್ತು. ಕೊರೊನಾ ಮಹಾಮಾರಿಯ ಭೀತಿಯಿಂದಾಗಿ ಸರ್ಕಾರ ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಬ್ರೇಕ್ ಹಾಕಿತ್ತು. ಆದರೆ ಕನಿಷ್ಟ ಸಂಖ್ಯೆಯ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಹಬ್ಬದ ಆಚರಣೆಗೆ ಷರತ್ತು ಬದ್ದ ಅನುಮತಿ ನೀಡಲಾಗಿತ್ತಾದರೂ ಟಿಬೇಟಿಯನ್ನರೇ ಸ್ವಯಂ ನಿರ್ಬಂಧ ವಿಧಿಸಿಕೊಂಡು ಹಬ್ಬದ ಆಚರಿಸಲಿಲ್ಲ. ಕಳೆದ ವರ್ಷದ ಕೊರೋನ ಸಂದರ್ಭದಲ್ಲಿ ಟಿಬೇಟಿಯನ್ನರು ಸಂಕಷ್ಟದಲ್ಲಿದ್ದ ಬಡ ವರ್ಗದವರಿಗೆ ಆಹಾರದ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು. ಇದೀಗ ಕೊರೊನಾ ಸಂಕಷ್ಟ ಕಾಲ
ದೂರವಾದ ಕಾರಣ ಅದ್ದೂರಿಯಾಗಿ ಟಿಬೆಟಿಯನ್ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.