ಮೈಸೂರು: ವಿಶೇಷಚೇತನರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಹುಣಸೂರು ತಾಲೂಕು ರಾಮೇನಹಳ್ಳಿಯ ದೃಷ್ಟಿ ದಿವ್ಯಾಂಗ ಚಂದ್ರನಾಯಕ ನಿರ್ಧಾರ ಮಾಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ವಿಶೇಷಚೇತನರ ಸಮಸ್ಯೆ ಬಗೆಹರಿಸುವಂತೆ ಈವರೆಗೆ ಮುಖ್ಯಮಂತ್ರಿ, ಸಂಬಂಧಿತ ಸಚಿವರು ಹಾಗೂ ಎಲ್ಲ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ. ಇವರು ಗಮನ ಹರಿಸದ ಹಿನ್ನೆಲೆಯಲ್ಲಿ ಫೆ.28ರಂದು ಮೈಸೂರಿನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.
ವಿಶೇಷಚೇತನ ವ್ಯಕ್ತಿಗಳ ಸಮಸ್ಯೆ ಬಗೆಹರಿಸಿ, ಸೌಲಭ್ಯ ಕಲ್ಪಿಸಲೆಂದು ವಿಕಲ ಚೇತನ ವ್ಯಕ್ತಿಗಳ ಕುಂದುಕೊರತೆ ಸಭೆ ಕರೆಯಬೇಕೆಂದಿದೆ. ಈ ಕುರಿತ ವಿಶೇಷ ಕಾಯಿದೆಯೂ ಇದೆ. ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೂ ಇದೆ. ಆದರೂ ಯಾವುದರಿಂದಲೂ ಅನುಕೂಲವಾಗುತ್ತಿಲ್ಲ. ನಮಗೆ ಕಳೆದ 11 ತಿಂಗಳಿನಿಂದ ಮಾಸಾಶನ ಬಂದಿಲ್ಲ. ಸಂಬಂಧಿತ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯಾರೂ ಸಕಾರಣ ನೀಡುತ್ತಿಲ್ಲ. ಇದೇ ರೀತಿಯ ಸಮಸ್ಯೆ ಇತರರೂ ಎದುರಿಸುತ್ತಿದ್ದಾರೆ ಎಂದು ಅವಲತ್ತುಕೊಂಡರು.
ಅಂತ್ಯೋದಯ ರೇಷನ್ ಕಾರ್ಡ್ ಕೊಡಿಸಬೇಕು. ಎಂಆರ್ಡಬ್ಲ್ಯೂ, ಯುಆರ್ಡಬ್ಲ್ಯೂಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷಚೇತನರಿಗೆ 6ರಿಂದ 12 ಸಾವಿರ ರೂ.ವರೆಗೆ ಸಂಬಳ ನೀಡಬೇಕು. ರಾಜ್ಯ ಮಟ್ಟದ ನಿಯಮಾನುಸಾರ ರಾಜ್ಯಮಟ್ಟದಿಂದ ತಾಲೂಕು ಮಟ್ಟದವರೆಗೂ ಉಚಿತ ಕಾನೂನು ಸೇವಾ ಸಮಿತಿಗಳು ಇದ್ದರು ವಿಕಲಚೇತನರ ವಿಚಾರದಲ್ಲಿ ಒಂದೂ ಪ್ರಕರಣ ನ್ಯಾಯಾಂಗದಲ್ಲಿ ದಾಖಲಾಗುತ್ತಿಲ್ಲ. ಅಂಗವಿಕಲ ವ್ಯಕ್ತಿಗಳ ಅಧಿನಿಯಮ 2016ರ ನಿಯಮಾನುಸಾರ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಶೇ.4ರಿಂದ 5ರಷ್ಟು ಉದ್ಯೋಗ ಮೀಸಲಿರಿಸಿ, ವಿಕಲಚೇತನರ ನೀಡಬೇಕೆಂದು ಕಾನೂನಿಲ್ಲಿದೆ. ಆದರೆ, ಈ ಕಾನೂನು ಸರ್ಕಾರ ಹಲವು ಇಲಾಖೆಯಲ್ಲಿ ಪಾಲನೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ವಿಶೇಷಚೇತನರ ಸೌಲಭ್ಯವನ್ನು ಸರಿಯಾಗಿ ನೀಡುತ್ತಿಲ್ಲ. ತಾಲ್ಲೂಕು ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪುನರ್ವಸತಿ ಕಾರ್ಯಕರ್ತರು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವಿಫಲವಾಗಿದ್ದಾರೆ. ಇವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಇನ್ನಿತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗುತ್ತಿದೆ. 45 ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.