ಮೈಸೂರು: ಪ್ಯಾಸೆಂಜರ್ ಆಟೋ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಮಕೃಷ್ಣನಗರ ನಿವಾಸಿ ಶರತ್ ಎಂದು ಗುರುತಿಸಲಾಗಿದೆ.
ಪೊಲೀಸರು ಭಾನುವಾರ ರಾತ್ರಿ ಕೆ.ಜಿ.ಕೊಪ್ಪಲು ಬಳಿ ಗಸ್ತಿನಲ್ಲಿದ್ದಾಗ ಪ್ಯಾಸೆಂಜರ್ ಆಟೋ ರಿಕ್ಷಾವೊಂದು ನಿಂತಿತ್ತು. ಅನುಮಾನಗೊಂಡ ಪೊಲೀಸರು ಆಟೋ ರಿಕ್ಷಾದೊಳಗೆ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ, ಮೊದಲು ಇದು ನನ್ನದೇ ಆಟೋ ಎಂದಿದ್ದಾನೆ. ಮತ್ತೊಂದು ಬಾರಿ ನನ್ನ ಸ್ನೇಹಿತನದು ಎಂದು ಹೇಳಿದ್ದಾನೆ. ದಾಖಲೆಗಳನ್ನು ಕೇಳಿದಾಗ ಇಲ್ಲ ಎಂದಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯು ರಾಮಕೃಷ್ಣನಗರದ ಸಾಯಿಬಾಬಾ ದೇವಸ್ಥಾನದ ಬಳಿ ಆಟೋರಿಕ್ಷಾವನ್ನು ಕಳ್ಳತನ ಮಾಡಿದ್ದಾಗಿಯೂ ಹಾಗೂ ದೇವರಾಜ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ಮತ್ತೊಂದು ಪ್ಯಾಸೆಂಜರ್ ಆಟೋರಿಕ್ಷಾವನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಪೊಲೀಸರು ಆಟೋರಿಕ್ಷಾ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.