ಮೈಸೂರು: ಪಿರಿಯಾಪಟ್ಟಣದ ಶಕ್ತಿದೇವತೆಗಳಾದ ಶ್ರೀ ಕನ್ನಂಬಾಡಿಯಮ್ಮನವರ ಬ್ರಹ್ಮರಥೋತ್ಸವ ಮಾ.16ರಂದು ಮತ್ತು ಶ್ರೀ ಮಸಣೀಕಮ್ಮನವರ ಬ್ರಹ್ಮ ರಥೋತ್ಸವ ಮಾ.19 ರಂದು ನಡೆಯಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಈಗಾಗಲೇ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಶಾಸಕ ಕೆ.ಮಹದೇವ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ದೇವಾಲಯದ ಅರ್ಚಕರು ಮತ್ತು ಗ್ರಾಮದ ಮುಖಂಡರ ಪೂರ್ವಭಾವಿ ಸಭೆ ನಡೆದು ಹಿಂದಿನಿಂದ ನಡೆದು ಬಂದ ಧಾರ್ಮಿಕ ಸಂಪ್ರದಾಯದಂತೆ ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಿ ಬ್ರಹ್ಮರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿತ್ತು, ಅದರಂತೆ ಎರಡು ದೇವಾಲಯಗಳಲ್ಲಿ ಪೂರ್ವ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.
ಶ್ರೀ ಕನ್ನಂಬಾಡಿಯಮ್ಮ ದೇವಾಲಯ: ಮಾ.9 ರ ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ಪಟ್ಟಣದ ಪುರಾತನ ದೇವರ ತೋಟದಿಂದ ಮೂರು ಕಳಸ ತರುವ ಮೂಲಕ ಶ್ರೀ ಕನ್ನಂಬಾಡಿಯಮ್ಮ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಮಾ.15 ರ ಸೋಮವಾರ ಸಂಜೆ ಅಂಕುರಾರ್ಪಣೆ ಪೂಜಾ ಮಹೋತ್ಸವ ಮೂಲಕ ದೇವಾಲಯ ಆವರಣದಲ್ಲಿ ರಥ ಅಲಂಕರಿಸುವ ಕಾರ್ಯ ಜರುಗಿತು, ಮಾ.16 ರ ಮಂಗಳವಾರ ಬೆಳಿಗ್ಗೆ 10.30ಗಂಟೆಯಿಂದ 11.55 ಗಂಟೆ ಒಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆದು ಸಂಜೆ ಪೇಟೆ ಬೀದಿಯಲ್ಲಿ ದೇವರ ಮೆರವಣಿಗೆ ನಡೆಯಲಿದೆ, ಮಾ.೧೭ ರ ಬುಧವಾರ ಸಂಜೆ ಅಶ್ವಾರೋಹಣ ಪೂಜೆ ಅಂಗವಾಗಿ ಪಟ್ಟಣದ ಕೋಟೆ ಮತ್ತು ಉಪ್ಪಾರಗೇರಿ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಲಿದೆ, ಮಾ.18ರ ಸಂಜೆ ದೇವಾಲಯ ಬಳಿಯ ಕಲ್ಯಾಣಿಯಲ್ಲಿ ದೇವರ ತೆಪ್ಪೋತ್ಸವ ನಡೆಯಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ, ಪೂರ್ವಸಿದ್ಧತಾ ತಯಾರಿಯಲ್ಲಿ ದೇವಾಲಯ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಪಿ.ಎಸ್ ಸಂಜೀವ್ ಮತ್ತು ಪದಾಧಿಕಾರಿಗಳು ಇದ್ದರು.
ಶ್ರೀ ಮಸಣೀಕಮ್ಮ ಜಾತ್ರೆಗೆ ಮಾ.4 ರ ಗುರುವಾರದಂದು ದೇವರ ತೋಟದ ಕೊಳದಿಂದ 7 ಕಳಸ ಮೆರವಣಿಗೆ ಮಾಡಿ ತರುವ ಮೂಲಕ ಚಾಲನೆ ದೊರೆತಿದೆ, ಮಾ.17 ರಂದು ಶ್ರೀ ಮಸಣೀಕಮ್ಮ ದೇವರ ಅಂಕುರಾರ್ಪಣೆ ಪೂಜೆ ಜರುಗಲಿದೆ, ಮಾ.18 ರ ಗುರುವಾರ ಬೆಳಿಗ್ಗೆ 10.30 ಗಂಟೆಯಿಂದ 11.45 ಗಂಟೆಯವರೆಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಬ್ರಹ್ಮರಥೋತ್ಸವ ಜರುಗಲಿದೆ, ಮಾ.19ರ ಶುಕ್ರವಾರ ಕೈತಟ್ಟೆ ಉತ್ಸವ ಅಂಗವಾಗಿ ಸಣ್ಣಯ್ಯನ ಬೀದಿ, ದೊಡ್ಡ ಬೀದಿ ಮತ್ತು ರಾಮಮಂದಿರ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಲಿದೆ, ಮತ್ತು ಮಾ.20 ರ ಶನಿವಾರ ಸಂಜೆ ದೇವೇಗೌಡನಕೊಪ್ಪಲು, ಉಪ್ಪಾರಗೇರಿ, ಹಮ್ಮಿಗೆ ರಸ್ತೆಯ ಆಂಜನೇಯ ದೇವಾಲಯ ಮೂಲಕ ಮೆರವಣಿಗೆ ಸಾಗಿ ಚಿಕ್ಕಕೆರೆಯಲ್ಲಿ ತೆಪ್ಪೋತ್ಸವ ಜರುಗಲಿದೆ ಎಂದು ದೇವಾಲಯದ ಅರ್ಚಕ ಹರೀಶ್ ಮಾಹಿತಿ ನೀಡಿದ್ದಾರೆ, ಜಾತ್ರಾ ಮಹೋತ್ಸವ ಅಂಗವಾಗಿ ದೇವೇಗೌಡನಕೊಪ್ಪಲು, ಉಪ್ಪಾರಗೇರಿ, ಒಳಕೋಟೆ ಹಾಗೂ ಕರಿಬಸಪ್ಪ ಲೇಔಟ್ ಗ್ರಾಮಗಳ ಮುಖಂಡರು ಮತ್ತು ಗ್ರಾಮಸ್ಥರು ಭರದ ಸಿದ್ಧತೆ ಕೈಗೊಂಡಿದ್ದಾರೆ.
ಬ್ರಹ್ಮರಥೋತ್ಸವ ಅಂಗವಾಗಿ ಎರಡು ದೇವಾಲಯವನ್ನು ಸುಣ್ಣ ಬಣ್ಣ, ತಳಿರು ತೋರಣ, ವಿವಿಧ ಬಗೆಯ ಪುಷ್ಪಾಲಂಕಾರ, ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸುವ ಕಾರ್ಯ ಭರದಿಂದ ಸಾಗಿದೆ, ದೇವಾಲಯದ ಹೊರ ಆವರಣದಲ್ಲಿ ರಥೋತ್ಸವ ಸಾಗುವ ಸ್ಥಳವನ್ನು ಸ್ವಚ್ಛಗೊಳಿಸಿ ರಥಗಳನ್ನು ಶುದ್ದಿ ಮಾಡುವ ಮೂಲಕ ಅಲಂಕಾರ ಕಾರ್ಯ ಸಾಗಿದೆ, ಬ್ರಹ್ಮರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ತಂಪು ಪಾನೀಯಗಳನ್ನು ವಿತರಿಸಲು ಪಟ್ಟಣದ ಹಲವು ಸಂಘ ಸಂಸ್ಥೆಗಳು ಸಜ್ಜಾಗಿವೆ, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ, ಬಿ.ಎಂ ರಸ್ತೆಯಲ್ಲಿ ರಥೋತ್ಸವ ಸಂಚರಿಸುವುದರಿಂದ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಆರಕ್ಷಕ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ, ಪಟ್ಟಣದ ಬಿ.ಎಂ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಆಕರ್ಷಣೀಯ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಲಾಗಿದೆ.
ಪಟ್ಟಣದ ಶಕ್ತಿದೇವತೆಗಳ ಬ್ರಹ್ಮರಥೋತ್ಸವ ಕಾರ್ಯ ನಿರ್ವಿಘ್ನವಾಗಿ ನೆರವೇರಲು ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ನೇತೃತ್ವದ ತಾಲ್ಲೂಕು ಆಡಳಿತ ವಿವಿಧ ಇಲಾಖೆ ಸಹಯೋಗದೊಂದಿಗೆ ಅಗತ್ಯ ಕ್ರಮ ಕೈಗೊಂಡು ಸಜ್ಜಾಗಿದೆ.