ಹುಣಸೂರು: ಬಯಲು ಸೀಮೆಯಲ್ಲೀಗ ಮಾರಮ್ಮನ ಜಾತ್ರೆ ನಡೆಯುತ್ತಿದ್ದು, ಅದರಂತೆ ತಾಲೂಕಿನ ನಂಜಾಪುರದ ಗ್ರಾಮ ದೇವತೆ ಶ್ರೀ ಮಾರಮ್ಮ ದೇವಿಯ ಉತ್ಸವವು ಗ್ರಾಮಾದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಗ್ರಾಮಸ್ಥರು ದೇವಿಗೆ ತಂಬಿಟ್ಟಿನ ಆರತಿ ಮಾಡಿ ಸೇವೆ ಅರ್ಪಿಸಿದರು.
ಜಾತ್ರೆ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ದೇವರಿಗೆ ವಿವಿಧ ಪೂಜೆಗಳನ್ನು ನೆರವೇರಿಸಿದರು.ಮೆರವಣಿಗೆ ಮೊದಲು ಗ್ರಾಮದಲ್ಲಿ ಹರಿಯುವ ಕಾಲುವೆಯಲ್ಲಿ ಪೂಜೆ ಸಲ್ಲಿಸಿದ ನಂತರ ದೇವರ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಗ್ರಾಮದ ಬೀದಿಗಳಲ್ಲಿ ದೇವಿಯ ಉತ್ಸವದ ಮೆರವಣಿಗೆ ನಡೆಯಿತು.ಜಾತ್ರೆ ಪ್ರಯುಕ್ತ ಆರು ನೂರಕ್ಕೂ ಹೆಚ್ಚು ಮಂದಿ ಮಕ್ಕಳು ಮತ್ತು ಹೆಂಗೆಳೆಯರು ತಂಬಿಟ್ಟನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಕೆಲ ಪುರುಷರು ಸಹ ವಿವಿಧ ಮಾದರಿಯ ತಂಬಿಟ್ಟು ತಟ್ಟೆಯನ್ನು ತಲೆ ಮೇಲೆ ಹೊತ್ತು ಮೆರವಣಿಗೆಯೊಂದಿಗೆ ದೇವಸ್ಥಾನದ ಬಳಿಗೆ ತೆರಳಿದರು.
ಹಬ್ಬದ ಹಿನ್ನಲೆಯಲ್ಲಿ ಗ್ರಾಮಕ್ಕೆ ನೆಂಟರಿಷ್ಟರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.