ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮೋತ್ಸವ ಎಂಬ ತೆಲುಗು ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ದೇಗುಲದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಸಿನಿಮಾ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬದಲಾಗಿ ಲಕ್ಷ್ಮೀನರಸಿಂಹ ದೇವಸ್ಥಾನ ಎಂದು ಹೆಸರು ಬದಲಾಯಿಸಿದ್ದಲ್ಲದೆ, ದೇಗುಲ ಮತ್ತು ಸುತ್ತಮುತ್ತ ಅಲಂಕಾರ ಮಾಡಲಾಗಿದೆ. ಸಿನಿಮಾಕ್ಕೆ ಸಂಬಂಧಿಸಿದಂತೆ ಜಾತ್ರೆಯ ದೃಶ್ಯವನ್ನು ಚಿತ್ರೀಕರಣ ನಡೆಸುತ್ತಿರುವುದರಿಂದ ದೇಗುಲದ ಆವರಣದಲ್ಲಿ ತಾತ್ಕಾಲಿಕ ಜಾತ್ರೆಯ ಸೆಟ್ ಗಳನ್ನು ಹಾಕಲಾಗಿದೆ. ಸದ್ಯ ಈಗ ನೋಡುವವರಿಗೆ ಹಣ್ಣುಕಾಯಿ ಅಂಗಡಿ, ಬಳೆ ಅಂಗಡಿ, ಚಪ್ಪಲಿ ಅಂಗಡಿ, ಆಟದ ಸಾಮಾನುಗಳ ಅಂಗಡಿ ಹೀಗೆ ಜಾತ್ರೆಯಲ್ಲಿ ಏನೇನು ಇರುತ್ತದೆಯೋ ಅದೆಲ್ಲವನ್ನು ಇಲ್ಲಿ ಹಾಕುವುದರೊಂದಿಗೆ ಜಾತ್ರಾ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಇಷ್ಟೇ ಅಲ್ಲದೆ ಲಕ್ಷ್ಮಿಕಾಂತ ದೇವಸ್ಥಾನ ಎಂಬ ನಾಮಫಲಕ ಅಳವಡಿಸಿ ಚಿತ್ರೀಕರಣ ನಡೆಸಲಾಗುತ್ತಿದೆ.
ಸುಮಾರು ಹತ್ತು ದಿನಗಳ ಕಾಲಕ್ಕೆ ದಿನಕ್ಕೆ ಹತ್ತು ಸಾವಿರದಂತೆ ಬಾಡಿಗೆ ನೀಡಿ ತೆಲುಗು ಚಿತ್ರತಂಡವು ಚಿತ್ರೀಕರಣಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರತಂಡದ ಎಸಿ ಬಸ್ಸುಗಳು, ಕಾರುಗಳು. ಇತರೆ ವಾಹನಗಳು. ತಂಡದ ಸಾಮಗ್ರಿಗಳು ಸೇರಿದಂತೆ ಇಡೀ ಚಿತ್ರತಂಡ ಬೀಡು ಬಿಟ್ಟಿದೆ. ಚಿತ್ರೀಕರಣದಲ್ಲಿ ಗೋಪಿಚೆಂದು ನಟಿ ಪ್ರೇಮ್-ರಕ್ಷಿತಾ, ಹಾಸ್ಯನಟ ಅಲ್ಲಿ, ಖುಷ್ಬು, ಜಗಪತಿಬಾಬು ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದಾರೆ.