ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಸುರಿದ ಮೊದಲ ಮುಂಗಾರು ಮಳೆ ರೈತರಿಗೆ ನಷ್ಟವನ್ನುಂಟು ಮಾಡಿದ್ದು, ಬಾಳೆ, ತೆಂಗು ಬೆಳೆದ ರೈತರು ಇದೀಗ ಚಿಂತಾಕ್ರಾಂತರಾಗಿದ್ದಾರೆ.
ಬಂಗಾಳಕೊಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಹಲವೆಡೆ ಮಳೆ ಸುರಿದಿದ್ದು, ಕೆಲವಡೆ ಹರ್ಷ ತಂದಿದ್ದರೆ ಮತ್ತೆ ಕೆಲವೆಡೆ ಅನಾಹುತ ಸೃಷ್ಟಿಸಿದೆ. ತಾಲೂಕಿನ ಬೇಗೂರು, ಕಸಬಾ, ತೆರಕಣಾಂಬಿ ಹೋಬಳಿಯ ಅನೇಕ ಗ್ರಾಮದ ರೈತರು ಬೆಳೆದಿದ್ದ ಮುಸುಕಿನ ಜೋಳ, ತೆಂಗು, ಬಾಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ತಾಲ್ಲೂಕಿನಾದ್ಯಾಂತ ಶನಿವಾರ ಮತ್ತು ಭಾನುವಾರ ಭಾರಿ ಗಾಳಿ ಮಳೆ ಸುರಿದಿದ್ದು ಪರಿಣಾಮ ಗೊನೆಬಿಟ್ಟಿದ್ದ ಬಾಳೆ ರಭಸದಿಂದ ಬೀಸಿದ ಗಾಳಿಗೆ ಮುರಿದು ಬಿದ್ದಿದೆ. ಇನ್ನೊಂದೆಡೆ ಮುಸುಕಿನ ಜೋಳ, ತೆಂಗು ಬೆಳೆದಿದ್ದ ರೈತರು ನಷ್ಟ ಅನುಭವಿಸುವಂತಾಗಿದೆ. ವಿಷಯ ತಿಳಿದು ಭಾನುವಾರ ತಹಶೀಲ್ದಾರ್ ರವಿಶಂಕರ್ ಅವರು ಅಧಿಕಾರಿಗಳೊಂದಿಗೆ ಮಳೆಹಾನಿಗೀಡಾದ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.