ಹನಗೋಡು: ನಾಗರಹೊಳೆ ಉದ್ಯಾನವನದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಿಂದ ಹೊರಬಂದಿದ್ದ ಕಾಡಾನೆಗಳ ಹಿಂಡೊಂದು ಹನಗೋಡು ಹೋಬಳಿಯ ನಲ್ಲೂರು ಪಾಲಾ ಬಳಿಯ ಹನಗೋಡು ಮುಖ್ಯ ನಾಲೆಯಲ್ಲಿ ಸಿಲುಕಿ ಮೇಲೆ ಹತ್ತಲಾಗದೆ ಪರದಾಡಿದ ಘಟನೆ ನಡೆದಿದ್ದು ಬಳಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕಾಡು ಸೇರಿ ನೆಮ್ಮದಿಯುಸಿರು ಬಿಟ್ಟಿವೆ.
ಭಾನುವಾರ ರಾತ್ರಿ ಮರಿ ಸೇರಿದಂತೆ ಐದು ಆನೆಗಳ ಹಿಂಡು ನಾಗರಹೊಳೆ ಉದ್ಯಾನದ ವೀರನಹೊಸಳ್ಳಿ ವಲಯದಂಚಿನ ಗುರುಪುರದ ಐ ವಿಲೇಜ್ ಬಳಿಯಿಂದ ಹೊರ ದಾಟಿದ್ದು, ಗುರುಪುರ, ಪೆಂಜಹಳ್ಳಿ ಭಾಗದ ಜಮೀನುಗಳಲ್ಲಿ ಬೆಳೆಯನ್ನು ಸೇವಿಸಿ ನಲ್ಲೂರು ಪಾಲ ಬಳಿಯ ರಾಘವೇಂದ್ರ ಬಾರ್ನ ಹಿಂಭಾಗದ ಜಮೀನಿನಲ್ಲಿ ಬೀಡು ಬಿಟ್ಟಿದ್ದವು.
ಸೋಮವಾರ ಮುಂಜಾನೆ ಅವುಗಳನ್ನು ಕಂಡ ಗ್ರಾಮಸ್ಥರು ಕಾಡಿಗಟ್ಟಲು ಮುಂದಾಗುತ್ತಿದ್ದಂತೆ ಬೆದರಿ ಪಕ್ಕದಲ್ಲೇ ಹರಿಯುತ್ತಿದ್ದ ಹನಗೋಡು ಮುಖ್ಯ ನಾಲೆಗಿಳಿದಿವೆ. ಈ ಸಂದರ್ಭ ಅವುಗಳನ್ನು ನೂರಾರು ಜನರು ಹೋ ಎಂದು ಕಿರುಚುತ್ತಾ, ಕಲ್ಲು ಎಸೆಯುತ್ತಿದ್ದಂತೆ ಬೆದರಿದ ಆನೆಗಳ ಹಿಂಡು ಕಾಲುವೆಯ ನೀರಿನಲ್ಲೇ ನಾಲ್ಕೈದು ಕಿ.ಮೀ. ದೂರ ಓಡಿ ದಣಿದು, ಕಲ್ಲೇಟಿನಿಂದ ಘಾಸಿಗೊಂಡು ತಪ್ಪಿಸಿಕೊಳ್ಳಲು ನಾಲೆಯ ಕಾಂಕ್ರಿಟ್ ತಡೆಗೋಡೆಯನ್ನೇ ಹತ್ತಲು ವಿಫಲ ಯತ್ನ ನಡೆಸಿದವು. ಕೊನೆಗೆ ಪೆಂಜಹಳ್ಳಿ ಹಾಡಿ ಬಳಿಯ ಸೋಪಾನಕಟ್ಟೆ ಮೂಲಕ ಕಾಲುವೆಯಿಂದ ಮೇಲೇರಿ ಬಂದು ಜನರ ಕಾಟದಿಂದ ತಪ್ಪಿಸಿಕೊಂಡು ಕಾಡಿನತ್ತ ಮುಖ ಮಾಡಿದವು.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಡಿ.ಆರ್.ಎಫ್.ಓ.ದ್ವಾರಕಾನಾಥ್ ನೇತೃತ್ವದಲ್ಲಿ ಆರ್.ಆರ್.ಟಿ. ಸಿಬ್ಬಂದಿ, ರಾತ್ರಿ ಕಾವಲುಗಾರರು ಹಾಗೂ ಹುಣಸೂರಿನ ಪ್ರಾದೇಶಿಕ ಅರಣ್ಯ ವಿಭಾಗದ ಸಿಬ್ಬಂದಿಗಳು ಆನೆಗಳನ್ನು ಟಿಬೇಟ್ ಲಾಮಾ ಕ್ಯಾಂಪ್ ಬಳಿಯಿಂದ ಕಾಡು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.