ಮೈಸೂರು: ಕಾಂಗ್ರೆಸ್ಗೆ ಮಾತ್ರವಲ್ಲ ನಮಗೂ ಆತ್ಮಸಾಕ್ಷಿಯಿದ್ದು, ರಾಜ್ಯಸಭಾ ಚುನಾವಣೆ ಫಲಿತಾಂಶದ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಶಾಸಕರ ಆತ್ಮಸಾಕ್ಷಿ ಮತಗಳು ಕಾಂಗ್ರೆಸ್ಗೆ ಬರುತ್ತವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೊಬ್ಬರಿಗೆ ಆತ್ಮಸಾಕ್ಷಿ ಇರೋದಾ, ನಮಗ್ಯಾರಿಗೂ ಇಲ್ವಾ? ಆತ್ಮಸಾಕ್ಷಿಯನ್ನು ಅವರೊಬ್ಬರಿಗೇ ಗುತ್ತಿಗೆ ಕೊಟ್ಟಿದ್ದೇವಾ ಎಂದು ಖಾರವಾಗಿ ಪ್ರಶ್ನಿಸಿದರು.
ಜಿ.ಟಿ.ದೇವೇಗೌಡರು ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಬೇರೆ ಯಾರೋ ಹೇಳುವ ಮಾತುಗಳಿಗೆ ಉತ್ತರ ಕೊಡುವುದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಧ್ರುವನಾರಾಯಣ್ ಅಡಿರುವ ಮಾತುಗಳನ್ನೆಲ್ಲಾ ಕೇಳಿದ್ದೇನೆ. ಎಲ್ಲದಕ್ಕೂ ಉತ್ತರ ನೀಡಲಿದ್ದು, ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಸಿದ್ಧನಿದ್ದೇನೆ ಎಂದರು.
ಕಳೆದ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಅಲ್ಲ, ಬಿಜೆಪಿಯೂ ಹೆಚ್.ಡಿ.ದೇವೇಗೌಡರ ವಿರುದ್ಧ ಅಭ್ಯರ್ಥಿ ಹಾಕಿರಲಿಲ್ಲ. ಈ ಸಂಬಂಧ ಕಾಂಗ್ರೆಸ್ಸಿಗೂ ಮೊದಲೇ ಬಿಜೆಪಿ ತೀರ್ಮಾನ ಕೈಗೊಂಡಿತ್ತು. ಬಿಜೆಪಿ ತೀರ್ಮಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಹಾಕುವುದಿಲ್ಲ ಎಂದು ಹೇಳಿತು. ಅಯ್ಯೋ ಪಾಪ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ. ಸಿದ್ದರಾಮಯ್ಯ ನಿಮ್ಮನ್ನು ಸೋಲಿಸಿದ್ದಾರೆ, ಈಗ ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ಅರ್ಜಿ ಇಡ್ಕೊಂಡು ಬಂದಿರಲಿಲ್ಲ ಎಂದು ಟಾಂಗ್ ನೀಡಿದರು.