ಮೈಸೂರು: ಕಾಂಗ್ರೆಸ್ನ ಪ್ರಶ್ನಾತೀತ ನಾಯಕ, ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರಗಳು ದೊರೆಯದ ಕಾರಣ ವರುಣಾಕ್ಕೆ ಮರಳುವಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಬೇರೆ ಕ್ಷೇತ್ರದಲ್ಲಿ ಬೆಂಬಲ ದೊರೆಯದ ಕಾರಣ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಮರಳಿ ಬರುತ್ತಿದ್ದಾರೆ. ಈ ಹಿಂದೆ ಬಾದಾಮಿಯಲ್ಲಿ ಅಲ್ಪ ಮತಗಳಿಂದ ಸೋಲಿನ ದವಡೆಯಿಂದ ಪಾರಾಗಿರುವುದನ್ನು ನಾವು ಕಾಣಬಹುದು ಎಂದು ಅವರು ತಿಳಿಸಿದರು. ಈ ಬಾರಿ ಎಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯಗೆ ಸೋಲು ಖಚಿತ ಎಂದರು. ಆದರೆ ಕೋಲಾರದಲ್ಲಿ ಟಿಕೇಟ್ ನೀಡಲು ಹೈಕಮಾಂಡ್ ಸಿದ್ದವಿಲ್ಲ.
ಈಗ ಕೇಳಿದ ಸ್ಥಳದಲ್ಲಿ ಟಿಕೇಟ್ ನೀಡಲು ಸಿದ್ಧವಿಲ್ಲ. ಈ ಕಾರಣದಿಂದ ಸಿಎಂ ಸ್ಥಾನದಲ್ಲಿ ಸಿದ್ದು ಅವರನ್ನು ಕುಳ್ಳಿರಿಸಲು ಹೈಕಮಾಂಡ್ ಸಿದ್ದವಿದೆಯೇ ಎಂದು ಪ್ರಶ್ನಿಸಿದರು. 2018ರಲ್ಲಿಯೇ ಅವರ ರಾಜಕೀಯ ಜೀವನ ಮುಗಿದಿದೆ ಎಂದರು. ವಿಧಾನಸಭೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು 2029ರವರೆಗೆ ಮೋದಿಯವರ ಆಡಳಿತದಲ್ಲಿ ಸಂಸದನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.