ಉಳ್ಳಾಲ: ಶರಣ್ ಪಂಪ್ ವೆಲ್ ಗೆ ಉಳ್ಳಾಲದಲ್ಲಿ ಬಂದು ಚುನಾವಣೆಗೆ ಸ್ಪರ್ಧಿಸುವುದಿದ್ದರೆ ಬಂದು ನೇರವಾಗಿ ಸ್ಪರ್ಧಿಸಲಿ ಅದು ಬಿಟ್ಟು ಧರ್ಮಗಳ ಮಧ್ಯೆ ಕೋಮುವಾದವನ್ನು ಬಿತ್ತುವ ಹೇಳಿಕೆಯನ್ನು ನೀಡುವ ಮೂಲಕ ಧರ್ಮವನ್ನು ಒಡೆಯುವ ಕೆಲಸವನ್ನು ಮಾಡುವುದು ಬೇಡ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮಂಗಳವಾರ ತೊಕ್ಕೊಟ್ಟಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉಳ್ಳಾಲಕ್ಕೆ ಬಂದು ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕೆಲಸಕ್ಕೆ ಶರಣ್ ಪಂಪ್ ವೆಲ್ ಮುಂದಾಗಿರುವುದನ್ನು ನಾವು ಖಂಡಿಸುತ್ತೇವೆ. ಶರಣ್ ಪಂಪ್ ವೆಲ್ ಹಿಂದೂ ಸಮಾಜವನ್ನು ಗುತ್ತಿಗೆ ತೆಗೆದುಕೊಂಡ ರೀತಿ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ಸಮಾಜದ ಸ್ವಾಸ್ಥ್ಯ ವನ್ನು ಕೆಡುಸುವಂತೆ ಮಾಡುತ್ತದೆ. ಹಿಂದೂಗಳ ಮೇಲೆ ಅಷ್ಟು ಕಾಳಜಿ ಇದ್ದರೆ ಅವರ ಮೂಲಭೂತ ಸೌಕರ್ಯಗಳು, ಭವಿಷ್ಯದ ಆರೋಗ್ಯ, ಶಿಕ್ಷಣದ ಬಗ್ಗೆ ಸ್ಪಂದಿಸಲಿ ಎಂದರು.
ಉಳ್ಳಾಲ ಕೋಮುಸೌಹಾರ್ದತೆಗೆ ಸಾಕ್ಷಿಯಾದ ಕ್ಷೇತ್ರ. ಇಲ್ಲಿನ ಶಾಸಕರಾದ ಯು. ಟಿ ಖಾದರ್ ಕೋಮುವಾದವನ್ನು ಬಿತ್ತುವ ಕೆಲಸವನ್ನು ಇದುವರೆಗೆ ಮಾಡಿಲ್ಲ. ಎಲ್ಲ ಧರ್ಮದ ಜನ ಜೊತೆ ಸೇರಿ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಳ್ಳಾಲದಲ್ಲಿ ಹಿಂದೂ ಶಾಸಕ ಬೇಕು ಅನ್ನುವ ಶರಣ್ ಪಂಪ್ ವೆಲ್ ಮಾತು ಸಮಂಜಸವಲ್ಲ ಎಂದ ಅವರು ಉಳ್ಳಾಲದಲ್ಲಿ ಯಾರು ಶಾಸಕ ಬೇಕು ಅನ್ನುವುದನ್ನು ಉಳ್ಳಾಲದ ಪ್ರಜ್ಞಾವಂತ ನಾಗರಿಕರು ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಾರೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸದಸ್ಯರು ಸುರೇಶ್ ಭಟ್ನಗರ್ ಮಾತನಾಡಿ ಚುನಾವಣೆ ಸಮೀಪಿಸುತ್ತಿದ್ದಂತೆ ಉಳ್ಳಾಲದಲ್ಲಿ ಬಂದು ಧಾರ್ಮಿಕ ಮುಖಂಡರ ಕೊಲೆಯ ಬಗ್ಗೆ ಕೊಟ್ಟ ಹೇಳಿಕೆಯನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ. ಇಂತಹ ಹೇಳಿಕೆ ಧರ್ಮಗಳ ಮಧ್ಯೆ ವೈಮನಸ್ಸು ಮೂಡಿಸುತ್ತದೆ. ಊಳ್ಳಾಲದಲ್ಲಿ ಅಭಿವೃದ್ಧಿಯ ಬಗ್ಗೆ ಹೇಳಿಕೆ ನೀಡಲಿ ಕೋಮುವಾದವನ್ನು ಯಾವ ಧರ್ಮದವರು ಮಾಡಿದರೂ ಅದಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಎಂದರು .
ಹಿಂದೂಳಿದ ವರ್ಗದ ಅಧ್ಯಕ್ಷರಾದ ದೀಪಕ್ ಕುಲಾಲ್, ಕಿಶಾನ್ ಘಟಕ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ , ಕಾಂಗ್ರೆಸ್ ಮುಖಂಡರಾದ ಹರೀಶ್ ಮೊಗವೀರ ಉಪಸ್ಥಿತರಿದ್ದರು.