ಮೈಸೂರು: ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದ ಶಾಸಕ ಎಸ್.ಎ.ರಾಮದಾಸ್ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಉಸಿರಿರುವ ತನಕವೂ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಉಳಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಕ್ಷೇತ್ರದ ಮುಖಂಡರು, ಕಾರ್ಯಕರ್ತರೊಂದಿಗೆ ಮಂಗಳವಾರ ಸರಣಿ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷೇತರವಾಗಿ ನಿಂತು ಗೆಲ್ಲಬಹುದು. ಆದರೆ ವೈಯಕ್ತಿಕ ಹಿತ ಮುಖ್ಯನಾ? ದೇಶದ ಹಿತ ಮುಖ್ಯನಾ? ಎಂದು ನನ್ನನ್ನು ಕೇಳಿಕೊಂಡೆ. ದೇಶದ ಹಿತದೃಷ್ಟಿಯಿಂದ ನನ್ನ ನೋವನ್ನು ನುಂಗಿದ್ದೇನೆ. ಅನಿರೀಕ್ಷಿತ ಬೆಳವಣಿಗೆಯನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ ಎಂದರು.
ಮೂರು ದಶಕಗಳ ಕಾಲದ ಪಕ್ಷದೊಂದಿಗಿನ ನಂಟನ್ನು ಕಳೆದುಕೊಳ್ಳುವುದಿಲ್ಲ. ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಪ್ರೀತಿ, ಮಮತೆ ಕಳೆದುಕೊಳ್ಳದೇ ಪಕ್ಷದಲ್ಲಿ ಉಳಿಯುವೆ. ಇದು ನನ್ನ ಜೀವನದ ದೊಡ್ಡ ಸವಾಲು. ನನ್ನ ಜೀವನದ ಪ್ರಶ್ನೆ. ಆದರೆ, ಸಂಘ ಪರಿವಾರ ವೈಯಕ್ತಿಕ ಹಿತಕ್ಕೆ ಪಕ್ಷದ ಹಿತಕ್ಕೆ ಬದ್ಧನಾಗಿರಬೇಕೆಂದು ಕಲಿಸಿದೆ. ಅದನ್ನು ಮೀರುವ ಇಚ್ಛೆ ನನಗಿಲ್ಲ. ನನಗೆ ಶಾಸಕ ಸ್ಥಾನ ಮುಖ್ಯವಲ್ಲ. ದೇಶ ಮತ್ತು ಮೋದಿ ಮುಖ್ಯ ಎಂದರು.
ಯಾಕೇ ಟಿಕೆಟ್ ತಪ್ಪಿತು? ಆ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಪಕ್ಷದ ನಿಯಮಗಳಿಗೆ ಬದ್ಧನಾಗಿರಬೇಕೆಂದು ಸುಮ್ಮನಾದೆ. ಈಗಲೂ ಪಕ್ಷದ ನಿರ್ಣಯಕ್ಕೆ ಬದ್ಧನಾಗಿರುವೆ. ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು. ಮೊದಲಿಂದಲೂ ಪಕ್ಷವನ್ನು ತಾಯಿ ಎಂದೇ ಭಾವಿಸಿದ್ದೇನೆ. ಆದರೆ, ತಳಮಟ್ಟದಿಂದ ಕಟ್ಟಿದ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದು ಎಲ್ಲರಿಗೂ ತಿಳಿಸಿದೆ. ಅಂದರೆ ಪಕ್ಷ ಯಾವುದೇ ಸ್ಥಿತಿಯಲ್ಲಿದ್ದರೂ ತಾಯಿ ಎಂದು ಒಪ್ಪಿಕೊಂಡಿದ್ದೇನೆ. ಪಕ್ಷದ ಆದೇಶಕ್ಕೂ ಬದ್ಧನಾಗಿದ್ದೇನೆ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ಶ್ರೀವತ್ಸ ಅವರು ಏ.20ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಭಾಗಿಯಾಗಲಿದ್ದೇನೆ. ಕೃಷ್ಣರಾಜ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುವರೇ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಮದಾಸ್ ಅವರು, ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದು ಉತ್ತರಿಸಿದರು.
ನನ್ನ ಪರವಾಗಿ ನಿರಂತರವಾಗಿ ದುಡಿದ ಕಾರ್ಯಕರ್ತರಿಗೆ ಬಿಜೆಪಿ ಯೋಗಕ್ಷೇಮ ನಿಧಿ ಆರಂಭಿಸಿ 1 ಕೋಟಿ ರೂ. ಹಣ ಹಾಕುತ್ತೇನೆ. ಯಾರೇ ಶಾಸಕರಾಗಲಿ ಸಾರ್ವಜನಿಕವಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಮನವಿ ಮಾಡುತ್ತೇನೆ ಎಂದರು.