ಮೈಸೂರು: ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಯಲ್ಲಿ ಮೂರೂವರೆ ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದ್ದು, ಇದು ದೇವಾಲಯದ ಇತಿಹಾಸದಲ್ಲಿಯೇ ದಾಖಲೆಯ ಸಂಗ್ರಹವಾಗಿದೆ.
ದೇವಾಲಯದ ಆವರಣದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 250 ಮಂದಿ ಸಿಸಿಟಿವಿ ಕಣ್ಗಾವಲಿನಲ್ಲಿ ದಿನವಿಡೀ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಎಣಿಕೆ ಮಾಡಿದರು.
ಆಷಾಢಮಾಸದಲ್ಲಿ ಬಂದ 4 ಶುಕ್ರವಾರ ಹಾಗೂ ಚಾಮುಂಡೇಶ್ವರಿ ವರ್ಧುಂತ್ಯುತ್ಸವ ಅಂಗವಾಗಿ ಚಾಮುಂಡಿ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದಲ್ಲದೇ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಆಗಮಿಸಿ ದೇವಿಯ ದರ್ಶನ ಪಡೆದಿದ್ದರು. ಈ ವೇಳೆ ಭಕ್ತರು ಹುಂಡಿಗೆ ಅರ್ಪಿಸಿದ ಕಾಣಿಕೆ ಎಣಿಕೆ ಕಾರ್ಯದಲ್ಲಿ 2,33,51,270 ರೂಪಾಯಿ ನಗದು, 270ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.
ಇದರ ಜೊತೆಗೆ 1,03,69,250 ರೂಪಾಯಿ ಪ್ರವೇಶ ಟಿಕೆಟ್ನಿಂದ ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಸಿ.ಜೆ.ಕೃಷ್ಣ ಮಾಹಿತಿ ನೀಡಿದ್ದಾರೆ.
ವಿವಿಧ ಮುಖಬೆಲೆಯ ನೋಟುಗಳಿಂದ 2,29,93,739 ರೂ. ಹಾಗೂ ನಾಣ್ಯಗಳಿಂದ 3,57,531 ರೂ. ಸೇರಿ 2,33,51,270 ರೂ. ಹಣ ಹುಂಡಿಯಿಂದ ಸಂಗ್ರವಾಗಿದೆ. ಹಾಗೆಯೇ ಆಷಾಢ ಮಾಸದಲ್ಲಿ ದೇಗುಲ ಪ್ರವೇಶಕ್ಕೆ ನೀಡಿದ್ದ ಟಿಕೆಟ್ನಿಂದ 1,03,69,270 ರೂ. ಸಂಗ್ರಹವಾಗಿದೆ. ಈ ಮೂಲಕ ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಿ ಮೂರುವರೆ ಕೋಟಿ ಒಡತಿಯಾಗಿರುವುದು ದಾಖಲೆಯಾಗಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಈ ಬಾರಿಯ ಆಷಾಢ ಮಾಸದ ಆದಾಯ ಮೀರಿಸಿದೆ.
ಹುಂಡಿ ಎಣಿಕೆ ವೇಳೆ ಕೆಲವರು ರಷ್ಯದ 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ 1 ಲಕ್ಷಕ್ಕೂ ಅಧಿಕ ನೋಟುಗಳು, ವಿದೇಶಿ ಕರೆನ್ಸಿಗಳನ್ನು ಹಾಕಿರುವುದು ಕಂಡುಬಂದಿದೆ. ಒಟ್ಟಾರೆ ಎರಡು ವರ್ಷಗಳ ಬಳಿಕ ಆಷಾಢದಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತರಿಗೆ ಅವಕಾಶ ನೀಡಿದ್ದರಿಂದ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.