ಮೈಸೂರು: ಕೇರಳದಿಂದ ಬಂದು ಕರ್ನಾಟಕದಲ್ಲಿ ಬೆಳೆಯುತ್ತಿರುವ ಶುಂಠಿ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಷೇಧ ಮಾಡಿ, ಸಾವಯವ ಕೃಷಿಯಲ್ಲಿ ಶುಂಠಿಯನ್ನು ಬೆಳೆಯಬೇಕು ಹಾಗೂ ಕೇರಳ ರಾಜ್ಯದ ಮಾದರಿಯಲ್ಲೇ, ಕರ್ನಾಟಕ ರಾಜ್ಯದಲ್ಲಿ ಕೂಡ ಮಣ್ಣಿನ ಫಲವತ್ತತೆಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಧ್ಯಕ್ಷ ಸಿ.ಚಂದನ್ ಗೌಡ ಮನವಿ ಮಾಡಿದ್ದಾರೆ.
ಕೇರಳ ರಾಜ್ಯದ ಶುಂಠಿ ಬೆಳೆಗಾರರ ಅಧ್ಯಕ್ಷ ಫಿಲಿಪ್ ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಿ.ಚಂದನ್ ಗೌಡ ಅವರು ಸಾವಯವ ಕೃಷಿಗೆ ಸಂಬಂಧಿಸಿದಂತೆ ಚರ್ಚಿಸಿದರು. ರಾಸಾಯನಿಕ ಮುಕ್ತ ಮಾಡುವುದರ ಜೊತೆಗೆ ಸಾವಯವದ ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಒತ್ತು ಕೊಟ್ಟು ಶುಂಠಿ ಬೆಳೆಯನ್ನ ಬೆಳೆಯಬೇಕು ಎಂಬ ಪ್ರಸ್ತಾವನೆ ಹಾಗೂ ಮನವಿ ಸಲ್ಲಿಸಿದ ವೇಳೆ ಇದಕ್ಕೆ ಸ್ಪಂದಿಸಿದ ಫಿಲಿಪ್ ಜಾರ್ಜ್ ಅವರು, ಕೇರಳದಲ್ಲೂ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ಅಲ್ಲಿನ ರೈತರಲ್ಲೂ ಈ ಕುರಿತು ಜಾಗೃತಿ ಮೂಡಿಸುವುದಾಗಿ ಮುಂದಿನ ದಿನಗಳಲ್ಲಿ ಕೇರಳ ರಾಜ್ಯದ ಸಾವಯವ ಕೃಷಿಯ ರೈತರಿಗೆ ರೈತ ಕಲ್ಯಾಣ ಸಂಘದಿಂದ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶುಂಠಿ ಬೆಳೆಗಾರರ ಸಂಘದ ಅಧ್ಯಕ್ಷ ಫೀಲಿಪ್ಸ್ ಜಾರ್ಜ್ ಅವರು, ರೈತ ಕಲ್ಯಾಣ ಸಂಘದ ಉದ್ದೇಶಗಳನ್ನು ಸ್ವಾಗತಿಸಿದರಲ್ಲದೇ, ಮುಂದಿನ ದಿನಗಳಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತುಕೊಟ್ಟು ರಾಸಾಯನಿಕ ಕೃಷಿಯನ್ನು ಸಂಪೂರ್ಣ ತ್ಯಜಿಸುವ ಪ್ರಯತ್ನಕ್ಕೆ ಮುಂದಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಹೇಮಂತ್ ಗೌಡ, ಹರೀಶ್ ಗೌಡ, ಸ್ವಾಮಿಗೌಡ, ಗೋವರ್ಧನ್, ಮೂರ್ತಿ, ವೇಣು, ನವೀನ ಗೌಡ, ರಘು,ಅಭಿ ಮತ್ತು ಸಂಜಯ್ ಉಪಸ್ಥಿತರಿದ್ದರು.