ಮೈಸೂರು: ಶೈಕ್ಷಣಿಕ ಸನ್ಮಾರ್ಗದಲ್ಲಿ ಏಳು ಬೀಳುಗಳು ಸಹಜ. ಇಲ್ಲಿ ಬಿದ್ದವರನ್ನು ಮೇಲೆತ್ತುವ, ಮೇಲೆದ್ದವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಮತ್ತಷ್ಟು ಮೇಲಕ್ಕೆ ಬೆಳೆಸುವ ಕಾಯಕವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಉಚಿತವಾಗಿ ಮಾಡುತ್ತಿರುವ ಪ್ರಾಂಶುಪಾಲ ಶಿವೇಗೌಡರ ಬೋಧಕರ ತಂಡ ಇಡೀ ರಾಜ್ಯಕ್ಕೆ ಮಾದರಿಯಾದದ್ದೆಂದು ಸಾಹಿತಿ ಬನ್ನೂರು ಕೆ.ರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಅಖಿಲ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘ ಹಾಗೂ ಪ್ರಾಚಾರ್ಯರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಗರದ ದೇವರಾಜ ಮೊಹಲ್ಲಾದಲ್ಲಿರುವ ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಸ್ತುತ ವರ್ಷದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಉಚಿತ ಅಲ್ಪಾವಧಿ ಬೋಧನಾ ತರಗತಿಗಳ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಗೆ ಎಷ್ಟೇ ಕೆಲಸ ಕಾರ್ಯಗಳ ಒತ್ತಡಗಳಿದ್ದರೂ ಕೂಡ ಅದನ್ನೆಲ್ಲ ಬದಿಗೊತ್ತಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಿಂಗಳ ಕಾಲ ಈ ಶಿಬಿರದಲ್ಲಿ ಪಾಠ ಮಾಡಿರುವ ಬೋಧಕರೆಲ್ಲರ ಪರಿಶ್ರಮ ಸಾರ್ಥಕವಾಗಬೇಕೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಳ್ಳೆ ಅಂಕಗಳೊಡನೆ ಉತ್ತೀರ್ಣರಾಗಬೇಕೆಂದರು.
ಮೈಸೂರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಿ.ಕೆ. ಶ್ರೀನಿವಾಸ ಮೂರ್ತಿ ಅವರು ಮಾತನಾಡಿ,ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಯಾಗುವುದು ಬಹು ಮುಖ್ಯ. ಆದರೆ ಅನುತ್ತೀರ್ಣತೆಯೂ ಕೂಡ ಅವರಿಗೆ ಬದುಕಿನ ಪಾಠ ಕಲಿಸುತ್ತದೆ. ಹಾಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವೈಫಲ್ಯ ಕಂಡಿರುವ ವಿದ್ಯಾರ್ಥಿಗಳು ತಾವು ಅನುತ್ತೀರ್ಣರಾ ಗಿದ್ದೇವೆಂದು ಹತಾಶರಾಗಬೇಕಿಲ್ಲ.ಬದಲಿಗೆ ಆತ್ಮಸ್ಥೈರ್ಯವನ್ನು ತಂದುಕೊಂಡು ಕಲಿಕೆಯತ್ತ ಇನ್ನೂ ಹೆಚ್ಚು ಗಮನ ಕೊಟ್ಟು ವಿಷಯ ತಜ್ಞ ಉಪನ್ಯಾಸಕರಿಂದ ನಡೆಯುತ್ತಿರುವ ಇಂತಹ ಉಚಿತ ಬೋಧನಾ ತರಗತಿಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಮುಂದಿನ ಮರು ಪರೀಕ್ಷೆಯಲ್ಲಿ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ರೂಪಿಸಿಕೊಂಡು ಯಶಸ್ಸು ಕಾಣಬೇಕೆಂದು ಶುಭ ಹಾರೈಸಿದ ಅವರು, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಿಸ್ವಾರ್ಥವಾಗಿ ನಡೆಸುತ್ತಿರುವ ಈ ಉಚಿತ ಬೋಧನಾ ತರಗತಿಗಳು ನಿಜಕ್ಕೂ ಸಾರ್ಥಕವಾದದ್ದೆಂದು ಹೇಳಿದರು.
ಚಾಮರಾಜನಗರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಾಗಮಲ್ಲೇಶ್ ಅವರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಸವಿವರವಾಗಿ ಮಾತನಾಡಿ ಮಾರ್ಗದರ್ಶನ ನೀಡಿದರಲ್ಲದೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿಕೊಳ್ಳಬಾರದೆಂದು ಸಲಹೆ ನೀಡಿದರು.
ಇದೇ ವೇಳೆ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರನ್ನು ಮರು ಪರೀಕ್ಷೆಗೆ ವ್ಯವಸ್ಥಿತವಾಗಿ ಸಿದ್ಧಗೊಳಿಸಿರುವ ಜಿಲ್ಲೆಯ ವಿವಿಧ ಕಾಲೇಜುಗಳ ವಿಷಯ ತಜ್ಞ ಉಪನ್ಯಾಸಕರಾದ ಸೂರ್ಯ ಕುಮಾರ್, ಎಸ್. ಬಾಲಸುಬ್ರಹ್ಮಣ್ಯಂ,ಎಂ ರಾಮಕುಮಾರ್,ಕೋಟೆ ವೆಂಕಟೇಶ್, ಎ.ಬಿ.ಸಬಿತಾ, ವಿಶ್ರಾಂತ ಪ್ರಾಂಶುಪಾಲ ಕೆ.ಎಂ. ಜಗದೀಶ್ ಉಷಾ ಎಸ್. ಗೋಂಧಳಿ, ಲೋಕೇಶ್ ಮುಂತಾದವರ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಲಾಯಿತು.
ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರೂ ಆದ ಪ್ರಾಚಾರ್ಯ ಕಾಡ್ನೂರು ಶಿವೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಾಜಗೋಪಾಲ್, ವಿಶ್ರಾಂತ ಪ್ರಾಂಶುಪಾಲರಾದ ಅನಂತಮೂರ್ತಿ, ಚಂದ್ರಪ್ಪ, ಉಪನ್ಯಾಸಕರಾದ ಡಾ.ವಿ.ಶ್ರೀಮತಿ, ಸುಶೀಲಾ ವಿ.ಭಟ್ ಕುರ್ಸಿ, ವಿ. ಆನಂದಕುಮಾರಿ, ಎಂ.ಕೆ.ರಾಧಾ,ಎಸ್.ಶ್ಯಾಮಲಾ, ಡಿ.ಪ್ರಭಾವತಿ, ಕೆ.ಎಸ್. ಜಗದೀಶ್, ಆನಂದ್ ಕುಮಾರ್ ಹಾಗೂ ಮಹದೇವ್ ಮುಂತಾದವರು ಉಪಸ್ಥಿತರಿದ್ದರು.