ಮೈಸೂರು: ಒಂದೇ ಕಡೆಯಲ್ಲಿ ಎರಡು-ಮೂರು ಬಾರಿ ದಾಳಿ ನಡೆಸಿರುವ ಚಿರತೆ ಸೆರೆಹಿಡಿಯಲು ವಿಶೇಷ ಟಾಸ್ಕ್ಫೋರ್ಸ್ ರಚಿಸಿ ಕೂಂಬಿಂಗ್ ಆಪರೇಷನ್ ನಡೆಸಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಸುತ್ತೂರು ಕ್ಷೇತ್ರದಲ್ಲಿ ಆಯೋಜಿಸಿರುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಾಲಕನೊಬ್ಬ ಹತ್ಯೆಗೀಡಾಗಿ ಮೃತದೇಹ ದೊರೆತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಚಿರತೆ ಸೆರೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ. ಒಂದೇ ಚಿರತೆ ಎರಡು-ಮೂರು ಬಾರಿ ಕಡೆಗಳಲ್ಲಿ ದಾಳಿ ಮಾಡಿರುವ ಹಿನ್ನಲೆಯಲ್ಲಿ ಅಂತಹ ಪ್ರದೇಶಗಳ ಎರಡು-ಮೂರು ಕಿ.ಮೀನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲು ಆದೇಶ ನೀಡಲಾಗಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬಂದೂಕುದಾರಿಗಳಾಗಿ ಕಾವಲುಗಾರರಾಗಿ ಕಾರ್ಯ ನಿರ್ವಹಿಸಬೇಕು. ವಿಶೇಷ ಪಡೆ ರಚಿಸಿ ಮತ್ತೊಂದು ಬಾರಿಗೆ ಮನುಷ್ಯನ ಮೇಲೆ ದಾಳಿ ನಡೆಸದಂತೆ ತಡೆಗಟ್ಟಿ ತಕ್ಷಣವೇ ಸೆರೆ ಹಿಡಿಯಲಾಗುವುದು ಎಂದರು.
ಚಿರತೆ ಕಾಣಿಸಿಕೊಂಡಿರುವ ಗ್ರಾಮದ ಜನರಿಗೆ ರಾತ್ರಿ ವೇಳೆ ಮನೆಯಿಂದ ಹೊರಗೆ ಬಾರದಂತೆ ಅರಿವು ಮೂಡಿಸುವ ಜತೆಗೆ ರಾತ್ರಿ ವೇಳೆ ಕಾವಲು ಮಾಡಬೇಕು. ಎರಡಿ-ಮೂರು ಕಿ.ಮೀನಷ್ಟು ಕಣ್ಣಿಟ್ಟು ಕಾವಲು ಮಾಡಲು ಬೇರೆ ಬೇರೆ ಜಿಲ್ಲೆಗಳಿಂದಲೂ ಅಗತ್ಯವಿರುವ ಸಿಬ್ಬಂದಿಯನ್ನು ಕರೆಸಿಕೊಳ್ಳುವುದಕ್ಕೆ ಸೂಚನೆ ಕೊಡಲಾಗಿದೆ. ಪ್ರಾಣಿಗಳ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಕೊಡುವ ಪರಿಹಾರದ ಮೊತ್ತ ಹೆಚ್ಚಿಸಲಾಗಿದ್ದು, ಹೊರಳಹಳ್ಳಿಯ ಮೃತ ಬಾಲಕನ ಕುಟುಂಬಕ್ಕೂ ಪರಿಹಾರದ ಚೆಕ್ ವಿತರಿಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಚಿರತೆ ದಾಳಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಕಳೆದ ಶುಕ್ರವಾರ ತಿ.ನರಸೀಪುರದಿಂದ ಹದಿನೈದು ಕಿ.ಮೀ.ದೂರದ ಕನ್ನಾಯಕನಹಳ್ಳಿ ಗ್ರಾಮದಲ್ಲಿ 3ನೇ ಪ್ರಕರಣ ನಡೆದಿದ್ದು, ಮತ್ತೆ ಶನಿವಾರ ರಾತ್ರಿ ಒಂದೂವರೆ ಕಿ.ಮೀ ದೂರದ ಹೊರಳಹಳ್ಳಿ ಗ್ರಾಮದಲ್ಲಿ ನಾಲ್ಕನೇ ಪ್ರಕರಣ ನಡೆದಿದೆ. ಈ ನಾಲ್ಕೂ ದಾಳಿಯೂ ಒಂದಕ್ಕೊಂದು ಸಾಮ್ಯತೆಯಿಂದ ಕೂಡಿರುವುದು ಹಾಗೂ ಘಟನಾ ಸ್ಥಳಗಳು 10 ಕಿ.ಮೀ. ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಒಂದೇ ಚಿರತೆ ನಾಲ್ವರನ್ನು ಬಲಿಪಡೆದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.