ಮೈಸೂರು: ವಿವೇಕಾನಂದರಂತಹ ಮಹನೀಯ ವ್ಯಕ್ತಿಗಳ ಆಶಯದಂತೆ ಶಿಕ್ಷಣದಲ್ಲಿ ವಿಶೇಷವಾಗಿ ಪರಿವರ್ತನೆಯಾಗಬೇಕು. ಶಿಕ್ಷಣದ ಮೂಲಕ ಜನರಲ್ಲಿ ಜಾಗೃತಿ ಮೂಡಬೇಕು, ಯಾವ ಜ್ಞಾನದ ಮೂಲಕ ಭಾರತ ಪ್ರಪಂಚವನ್ನು ಗೆದ್ದಿತ್ತೋ ಆ ರೀತಿಯ ಜ್ಞಾನ ಮುಂದಿನ ಪೀಳಿಗೆಯ ಮಕ್ಕಳಿಗೆ ಬರಬೇಕು ಎಂಬ ಅವರ ಯೋಚನೆಗಳು ಕಾರ್ಯರೂಪಕ್ಕೆ ಬರಲು ಸ್ವಾತಂತ್ರ್ಯ ಬಂದು 75 ವರ್ಷ ಬೇಕಾಯಿತು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಸರಗೂರು ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಅಂಗಸಂಸ್ಥೆಯಾದ ವಿವೇಕಾ ಸ್ಕೂಲ್ ಆಫ್ ಎಕ್ಸೆಲೆನ್ಸ್ ಕಾಲೇಜಿನ ಆವರಣದಲ್ಲಿ ನಡೆದ ವಿವೇಕಾ ಸ್ಕೂಲ್ ಆಫ್ ಎಕ್ಸೆಲೆನ್ಸ್ ಸೈನಿಕ ಶಾಲೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಶಿಕ್ಷಣದಿಂದ ಜಾಗೃತಿ ಸಾಧ್ಯ. ಆದ್ದರಿಂದ ಈ ದೇಶದ ಶಿಕ್ಷಣ ಪದ್ಧತಿ ಬದಲಾಯಿಸಬೇಕು ಎಂದು ತೀರ್ಮಾನಿಸಿ 2020ರಲ್ಲಿ ಬದಲಾಯಿಸಲಾಯಿತು. ಆದರೆ ಯೋಚನೆ ಈ ದೇಶದ ಪ್ರಧಾನಿಯದಲ್ಲ ಬದಲಿಗೆ ಯಾರು ಬ್ರಿಟಿಷರ ಕಾಲವನ್ನು ನೋಡಿದ್ದರು, ಯಾರು ಅವರ ಅನ್ಯಾಯ ನೋಡಿದ್ದರು, ಅನ್ಯಾಯದ ಮೂಲಕ ದೇಶದ ಸಮಾಜವನ್ನು ಹಾಳುಮಾಡಲು ಹೊರಟಿದ್ದು ಅವರ ಎಲ್ಲಾ ವ್ಯವಸ್ಥೆಗಳನ್ನು ಬದಲಾಯಿಸಬೇಕು ಎಂದು ಹೋರಾಡಿದ ವಿವೇಕಾನಂದರಂತಹ ಅನೇಕ ಸಾಧು, ಸಂತರು, ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿಗಳ ಯೋಚನೆಯಾಗಿತ್ತು ಎಂದರು.
ಯಾರು ತನ್ನ ವೈಯಕ್ತಿಕ ಆಸೆಗಾಗಿ ರಾಜಕೀಯಕ್ಕೆ ಬಂದರು ಅವರು ದೇಶಭಕ್ತರಾಗಿದ್ದರು, ಯಾರು ಈ ದೇಶ ಒಗ್ಗಟ್ಟಾಗಿರಬೇಕು, ದೇಶ ಪ್ರಪಂಚದ ಗುರುವಾಗಬೇಕು ಎಂದು ಆಸೆ ಪಟ್ಟರೋ ಅವರು ದೇಶದ್ರೋಹಿಗಳಂತಾಗಿದೆ,ಇದಕ್ಕೆ ಕಾರಣ ನಮ್ಮಲ್ಲಿದ್ದ ಶಿಕ್ಷಣ ಪದ್ದತಿ. ನಮ್ಮ ಮೈಂಡ್ಸೆಟ್ ಆ ಮಟ್ಟದಲ್ಲಿದೆ ಆದ್ದರಿಂದ ನಮ್ಮಲ್ಲಿದ್ದ ಶಿಕ್ಷಣ ನೀತಿ ಬದಲಾಗಬೇಕು ಎಂದು ತಜ್ಞರ ಅಭಿಪ್ರಾಯದಂತೆ ಹೊಸ ಶಿಕ್ಷಣ ನೀತಿಯನ್ನು ಈ ದೇಶಕ್ಕೆ ತರಲಾಯಿತು. ಹೊಸ ಶಿಕ್ಷಣ ನೀತಿಯಲ್ಲಿ ಮಗುವಿಗೆ ಎಲ್ಲಿ ಸಂತೋಷದ ಜೊತೆಗೆ ತನಗಿಚ್ಛೆ ಬಂದಂತೆ ಜ್ಞಾನಾರ್ಜನೆಯ ಅವಕಾಶದ ಜೊತೆಗೆ ಮಕ್ಕಳಿನ ಪ್ರತಿಭೆಯನ್ನು ಆಚೆ ತರುವ ಪ್ರಯತ್ನ ಮಾಡುವುದು, ಎಲ್ಲದಕ್ಕಿಂತ ರಾಷ್ಟ್ರೀಯ ಭಕ್ತಿಯನ್ನು ಮಕ್ಕಳಲ್ಲಿ ಬೆಳಸುವುದು ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದರು.
ಸಾವರ್ಕರ್ ದೇಶಕ್ಕಾಗಿ ಕಠಿಣ ಜೈಲು ವಾಸ ಅನುಭವಿಸಿದವರು. ಅವರು ಕೈ ಕಾಲುಗಳನ್ನು ಕಭ್ಬಿಣದಿಂದ ಬಿಗಿದು ಪ್ರಾಣಿಗಳಂತೆ ಎಣ್ಣೆ ತೆಗೆಸಲಾಗುತ್ತಿತ್ತು. ಅಂತಹ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಂದಿನ ಕೆಲ ರಾಜಕೀಯ ಪಕ್ಷಕ್ಕೆ ತಿಳಿಯದೆ ಇರುವುದು ಬಹಳ ಬೇಸರದ ಸಂಗತಿಯಾಗಿದೆ ಎಂದರು.